ಬೆಳ್ತಂಗಡಿ: ತಾಲ್ಲೂಕಿನ ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾಡಿ-1 ಸಮೀಪದ ಸೊರಕ್ಕೆ ಬಳಿ ರಬ್ಬರ್ ತೋಟದ ಅಂಚಿನಲ್ಲಿರುವ ನೀರು ಸಾಗುವ ಕಣಿಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ಮಹಿಳೆ ದೇಹವೊಂದು ಸೋಮವಾರ ಪತ್ತೆಯಾಗಿದೆ.
ಸಮೀಪದ ಮನೆಯವರಿಗೆ ದುರ್ನಾತ ಬರುತ್ತಿದ್ದ ಕಾರಣ ಪರಿಶೀಲಿಸಿದಾಗ ಈ ವಿಷಯ ಗಮನಕ್ಕೆ ಬಂದಿದೆ. ಕಣಿಯಲ್ಲಿ ಸುಟ್ಟರೂಪದ ದೇಹದ ಮೇಲೆ ಕಟ್ಟಿಗೆ ರಾಶಿ ಬಿದ್ದಿದೆ. ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಎಂಬ ಸಂಶಯ ಮೂಡಿದರೂ ಕಟ್ಟಿಗೆ ರಾಶಿ ಶವದ ಮೇಲೆ ಕಂಡಾಗ ಕೊಲೆ ನಡೆಸಿರುವ ಸಾಧ್ಯತೆಯ ಬಗ್ಗೆಯೂ ಅನುಮಾನ ಮೂಡಿದೆ.
ಗುರುತು ಪತ್ತೆ ಸಾಧ್ಯವಾಗದಷ್ಟು ದೇಹ ಸುಟ್ಟು ಕರಕಲಾಗಿದ್ದು, ಸ್ಥಳದಲ್ಲಿ ದೊರೆತ ಕಾಲುಂಗುರ ಆಧರಿಸಿ ಮಹಿಳೆಯ ದೇಹ ಆಗಿರಬಹುದೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ ನಂದಕುಮಾರ್ ಎಂ.ಎಂ. ಸಹಿತ ಸಿಬ್ಬಂದಿ ಭೇಟಿ ನೀಡಿದ್ದಾರೆ. ರಾತ್ರಿಯಾದ ಕಾರಣ ಶವ ಸ್ಥಳದಲ್ಲೇ ಇದ್ದು ಮಂಗಳವಾರ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳಕ್ಕೆ ಭೇಟಿ ನೀಡಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.