ADVERTISEMENT

ಲಷ್ಕರ್‌ ಪರ ಗೋಡೆಬರಹ| ತನಿಖೆಗೆ ತೊಡಕಾಗುತ್ತಿದೆ ಅಸ್ಪಷ್ಟ ಸಿಸಿಟಿವಿ ದೃಶ್ಯಾವಳಿ

ಪ್ರಚೋದನಕಾರಿ ಗೋಡೆಬರಹ: ಮೂವರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 2:07 IST
Last Updated 1 ಡಿಸೆಂಬರ್ 2020, 2:07 IST
   

ಮಂಗಳೂರು: ನಗರದ ಎರಡು ಕಡೆಗಳಲ್ಲಿ ವಿವಾದಿತ ಗೋಡೆಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಎರಡೂ ಪ್ರಕರಣಗಳಲ್ಲಿ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳು ಅಸ್ಪಷ್ಟವಾಗಿರುವುದರಿಂದ ತನಿಖೆಗೆ ತೊಡಕಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಮಧ್ಯೆ ಕದ್ರಿಯ ಅಪಾರ್ಟ್‌ಮೆಂಟ್‌ ಗೋಡೆಯ ಮೇಲೆ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಗೋಡೆಬರಹ ಬರೆದಿರುವ ಆರೋಪಿಗಳು ತಮ್ಮ ಕೆಲಸವಾಗುತ್ತಲೇ ನಗರದಿಂದ ಜಾಗ ಖಾಲಿ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಇದೀಗ ತನಿಖೆ ತೀವ್ರಗೊಳಿಸಿರುವ ಪೊಲೀಸರು, ಈ ಬರಹಗಳನ್ನು ಬರೆದವರ ಹಿಂದೆ ಯಾವ ಸಂಘಟನೆ ಇದೆ? ಇವರಿಗೆ ಸಹಾಯ ಮಾಡಿದವರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ.

ಗೋಡೆಬರಹ ಪ್ರಕರಣಗಳಲ್ಲಿ ಪ್ರತ್ಯಕ್ಷ ಸಾಕ್ಷಿಗಳು ಇಲ್ಲದಿರುವುದು, ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಅಸ್ಪಷ್ಟವಾಗಿರುವುದರಿಂದ ತನಿಖೆ ವಿಳಂಬವಾಗುತ್ತಿದೆ. ಘಟನೆಗೆ ಸಂಬಂಧಪಟ್ಟಂತೆ ನಗರದಾದ್ಯಂತ ಹಲವು ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪಡೆದು, ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಗೋಡೆಬರಹವನ್ನು ಸ್ಪಷ್ಟ ಇಂಗ್ಲಿಷ್‌ನಲ್ಲಿ ತಪ್ಪಿಲ್ಲದೇ ಬರೆಯಲಾಗಿದ್ದು, ಇಂಗ್ಲಿಷ್‌ ಚೆನ್ನಾಗಿ ಗೊತ್ತಿರುವವರೇ ಬರೆದಿರುವುದಾಗಿ ಅಂದಾಜಿಸಲಾಗಿದೆ.

ಕೇಂದ್ರ ಉಪವಿಭಾಗದ ಎಸಿಪಿ ಎಂ. ಜಗದೀಶ್, ಕದ್ರಿ ಠಾಣೆ ಇನ್‌ಸ್ಪೆಕ್ಟರ್‌ ಪವಿತ್ರತೇಜ, ಸಿಸಿಬಿ ಇನ್‌ಸ್ಪೆಕ್ಟರ್‌ ಮಹೇಶ್ ಪ್ರಸಾದ್ ನೇತೃತ್ವದ ಮೂರು ತಂಡಗಳು ವಿವಿಧ ಆಯಾಮಗಳಿಗೆ ಪ್ರಕರಣದ ತನಿಖೆ ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.