ADVERTISEMENT

ಚಾರ್ಮಾಡಿ: ತಾತ್ಕಾಲಿಕ ಸೇತುವೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 12:27 IST
Last Updated 18 ಫೆಬ್ರುವರಿ 2025, 12:27 IST
ಗ್ರಾಮಸ್ಥರೇ ನಿರ್ಮಿಸಿದ ತಾತ್ಕಾಲಿಕ ಸೇತುವೆ
ಗ್ರಾಮಸ್ಥರೇ ನಿರ್ಮಿಸಿದ ತಾತ್ಕಾಲಿಕ ಸೇತುವೆ   

ಉಜಿರೆ: ಚಾರ್ಮಾಡಿ ಗ್ರಾಮದ ಕೊಳಂಬೆಯಲ್ಲಿ ಮೃತ್ಯುಂಜಯ ನದಿಗೆ ಗ್ರಾಮಸ್ಥರೇ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಿದ್ದಾರೆ.

ಸದ್ಯ ನದಿಯಲ್ಲಿ ಸಾಮಾನ್ಯ ಮಟ್ಟದಲ್ಲಿ ನೀರು ಹರಿಯುತ್ತಿದ್ದು, ಸರಾಗವಾಗಿ ಹರಿದು ಹೋಗಲು ಸಿಮೆಂಟ್ ಪೈಪ್ ಅಳವಡಿಸಿ ಅದರ ಮೇಲೆ ಕಲ್ಲು ಹಾಗೂ ಮರಳು ಜೋಡಿಸಿ ಸೇತುವೆ ರಚಿಸಿದ್ದಾರೆ. ಲಾರಿ ಸಂಚರಿಸುವಷ್ಟು ಸೇತುವೆ ಅಗಲವಾಗಿದೆ.

ತಾತ್ಕಾಲಿಕ ಸೇತುವೆಯಿಂದಾಗಿ ಅನ್ನಾರು, ಮುಗುಳಿತಡ್ಕ, ಪಾದೆ, ಮರ್ವದಡಿ, ಅರಣಪಾದೆ, ಕೆಮ್ಟಾಜೆ ಪ್ರದೇಶಗಳ ಸುಮರು 100 ಹೆಚ್ಚಿನ ಕುಟುಂಬಗಳಿಗೆ ಚಾರ್ಮಾಡಿ, ಕಕ್ಕಿಂಜೆಗೆ ಸಂಪರ್ಕಿಸಲು ನಾಲ್ಕು ಕಿ.ಮೀ. ಕಡಿಮೆಯಾಗುತ್ತದೆ. ಈ ಪ್ರದೇಶಗಳಿಗೆ ಕತ್ತರಿಗುಡ್ಡೆ ಮೂಲಕ ರಸ್ತೆ ಇದೆ. ಆದರೆ, ಆ ರಸ್ತೆ ಹದಗೆಟ್ಟಿದ್ದು, ಅಭಿವೃದ್ಧಿ ಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ADVERTISEMENT

ತಾತ್ಕಾಲಿಕ ಸೇತುವೆ ನಿರ್ಮಿಸಿದ ಜಾಗದಲ್ಲಿ ಕಿರುಸೇತುವೆ ನಿರ್ಮಾಣವಾದರೆ ಚಾರ್ಮಾಡಿಯ ಒಂದು ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ವಿಶೇಷ ಉಪನ್ಯಾಸ ನಾಳೆ

ಉಜಿರೆ: ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ, ಕಾಲೇಜಿನ ಪ್ರಾಂಶುಪಾಲರಾಗಿದ್ದ ದಿ.ಬಿ.ಯಶೋವರ್ಮ ಅವರ ಸ್ಮರಣಾರ್ಥ  ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಫೆ.20ರಂದು ಬೆಳಿಗ್ಗೆ 11ಗಂಟೆಗೆ ಅರಿವಿನ ದೀವಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

‘ಪರಿಸರ ಸಂರಕ್ಷಣೆ - ಪರ್ಯಾಯ ದಾರಿಗಳು’ ಕುರಿತು ಲೇಖಕ ಶಿರಸಿಯ ಶಿವಾನಂದ ಕಳವೆ ಉಪನ್ಯಾಸ ನೀಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸುವರು ಎಂದು ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಬೋಜಮ್ಮ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಭಾಸ್ಕರ ಹೆಗಡೆ, ಕಾರ್ಯಕ್ರಮದ ಸಂಯೋಜಕ ಪ್ರೊ.ನಾಗಣ್ಣ ಡಿ.ಎ. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.