ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕ್ರಿಸ್ಮಸ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಜಿಲ್ಲೆಯ ಚರ್ಚ್ಗಳು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಝಗಮಗಿಸುವ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿವೆ. ಹಬ್ಬದ ಮುನ್ನಾ ದಿನವಾದ ಮಂಗಳವಾರ ರಾತ್ರಿ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆಗಳು, ಬಲಿಪೂಜೆಗಳು ನಡೆದವು. ಕ್ರೈಸ್ತ ಬಾಂಧವರು ಪ್ರಾರ್ಥನೆಗಳಲ್ಲಿ ಶ್ರದ್ಧಾಭಕ್ತಿಯಿಂದ ಭಾಗವಹಿಸಿದರು.
ಯೇಸುಕ್ರಿಸ್ತರ ಜನ್ಮ ಸಂದೇಶ ಸಾರುವ ಆಕರ್ಷಕ ಗೋದಲಿಗಳು ಚರ್ಚ್ಗಳ ಬಳಿ ಗಮನ ಸೆಳೆಯುತ್ತಿವೆ. ಹಬ್ಬದ ಪ್ರಯುಕ್ತ ಚರ್ಚ್ಗಳಲ್ಲಿ ಕ್ರಿಸ್ಮಸ್ ಮುನ್ನಾದಿನದ ಸಂಜೆ ಹೊತ್ತು ಕ್ರಿಸ್ಮಸ್ ಕ್ಯಾರೆಲ್ಸ್ ಹಾಗೂ ವಿಶೇಷ ಕಾರ್ಯಕ್ರಮಗಳು ನಡೆದವು. ಕ್ರೈಸ್ತರು ಕ್ರಿಸ್ಮಸ್ ಪರಸ್ಪರ ಶುಭಾಶಯ ಕೋರಿ, ಸಿಹಿತಿನಸುಗಳನ್ನು (ಕುಸ್ವಾರ್) ಕೇಕ್ಗಳನ್ನು ಹಂಚಿ ಸಂಭ್ರಮಿಸಿದರು.
ನಗರದ ಪ್ರಮುಖ ಕಟ್ಟಡಗಳು, ಬೀದಿಗಳು ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಸಂಭ್ರಮದ ಸಲುವಾಗಿ ವಿದ್ಯುದೀಪಗಳಿಂದ ಅಲಂಕೃತಗೊಂಡಿವೆ. ಪರವೂರುಗಳಲ್ಲಿ ನೆಲೆಸಿರುವ ಕ್ರೈಸ್ತ ಸಮುದಾಯವರು ಹಬ್ಬದ ಸಲುವಾಗಿ ಊರಿಗೆ ಮರಳಿದ್ದಾರೆ. ನಗರದಲ್ಲಿ ಕ್ರಿಸ್ಮಸ್ ಖರೀದಿ ಭರಾಟೆಯೂ ಜೋರಾಗಿತ್ತು. ಅನೇಕ ಮಳಿಗೆಗಳು ಹಬ್ಬದ ಸಲುವಾಗಿ ವಿಶೇಷ ರಿಯಾಯಿತಿಗಳನ್ನು ಪ್ರಕಟಿಸಿದೆ. ನಗರದ ಪ್ರಮುಖ ಜಂಕ್ಷನ್ಗಳಲ್ಲಿ ಎರಡು ದಿನಗಳಿಂದ ಸಂಚಾರ ದಟ್ಟಣೆಯೂ ಹೆಚ್ಚು ಇತ್ತು.
ರೊಸಾರಿಯೊ ಕೆಥೆಡ್ರಲ್ನಲ್ಲಿ ವಿಶೇಷ ಬಲಿಪೂಜೆ:
ರೊಸಾರಿಯೊ ಕೆಥೆಡ್ರಲ್ನಲ್ಲಿ ಹಬ್ಬದ ಪ್ರಯುಕ್ತ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ನೇತೃತ್ವದಲ್ಲಿ ಮಂಗಳವಾರ ರಾತ್ರಿ ವಿಶೇಷ ಬಲಿಪೂಜೆ ನೆರವೇರಿತು. ಕೆಥೆಡ್ರಲ್ನ ಪ್ರಧಾನ ಧರ್ಮಗುರು ಫಾ.ಆಲ್ಪ್ರೆಡ್ ಪಿಂಟೊ ಸೇರಿದಂತೆ ಅನೇಕ ಧರ್ಮಗುರುಗಳು ಭಾಗವಹಿಸಿದ್ದರು.
ನಗರದ ಮಿಲಾಗ್ರಿಸ್ ಚರ್ಚ್ನಲ್ಲಿ ಫಾ.ಬೊನವೆಂಚರ್ ನಜರೇತ್, ಕೂಳೂರು ಚರ್ಚ್ನಲ್ಲಿ ಫಾ.ವಿಜಯ ವಿಕ್ಟರ್ ಲೋಬೊ, ಉರ್ವ ಲೇಡಿಹಿಲ್ ಚರ್ಚ್ನಲ್ಲಿ ಫಾ.ಬೆಂಜಮಿನ್ ಪಿಂಟೊ, ಅಶೋಕನಗರದ ಸೇಂಟ್ ಡೊಮಿನಿಕ್ ಚರ್ಚ್ನಲ್ಲಿ ಫಾ. ಡೇನಿಯಲ್ ಸಂಪತ್ ವೇಗಸ್, ಅವರು ಕ್ರಿಸ್ಮಸ್ ಹಬ್ಬದ ಸಲುವಾಗಿ ನಡೆದ ಬಲಿಪೂಜೆಯ ನೇತೃತ್ವ ವಹಿಸಿ ಸಂದೇಶ ನೀಡಿದರು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಎಲ್ಲ ಚರ್ಚ್ಗಳಲ್ಲಿ ಇದೇ 25ರಂದು (ಬುಧವಾರ) ಬೆಳಿಗ್ಗೆಯಿಂದಲೇ ವಿಶೇಷ ಬಲಿಪೂಜೆಗಳು ನಡೆಯಲಿವೆ. ಸಂಜೆ ಕ್ರಿಸ್ಮಸ್ ವಿಶೇಷ ಕಾರ್ಯಕ್ರಮಗಳು ನೆರವೇರಲಿದೆ. ನಂತೂರಿನ ಭಗಿನಿಯರ ಕಾನ್ವೆಂಟ್ನಲ್ಲಿ ಹಬ್ಬದ ವಿಶೇಷ ಬಲಿಪೂಜೆಯನ್ನು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ನೆರವೇರಿಸಲಿದ್ದು, ಬಳಿಕ ವಿಶೇಷ ಸಂದೇಶವನ್ನು ನೀಡಲಿದ್ದಾರೆ.
ಪ್ರೀತಿಯೇ ದೇವರ ನಿಜವಾದ ಭಾಷೆ: ಬಿಷಪ್ ರೊಸಾರಿಯೊ
ಕೆಥೆಡ್ರಲ್ನಲ್ಲಿ ಬಲಿಪೂಜೆ ಸಲ್ಲಿಸಿದ ಬಳಿಕ ಕ್ರಿಸ್ಮಸ್ ಹಬ್ಬದ ಸಂದೇಶ ನೀಡಿದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ ‘ದೇವರು ಮಾತನಾಡುವುದು ಪ್ರೀತಿಯ ಭಾಷೆಯಲ್ಲಿ. ಸಮಾಜದಲ್ಲಿರುವ ನೆರೆಹೊರೆಯರಿಗೆ ಪ್ರೀತಿ ಹಂಚಬೇಕು ಎಂದು ಹಬ್ಬದ ಮೂಲಕ ಯೇಸು ಸಾರುತ್ತಾರೆ. ನಾವೂ ಪ್ರೀತಿಗೆ ಹೆಚ್ಚು ಮಹತ್ವ ಕೊಡಬೇಕು’ ಎಂದರು.
‘ಯೇಸುಕ್ರಿಸ್ತರು ಪ್ರೀತಿಯ ಮಾತುಗಳನ್ನೇ ಹೇಳುತ್ತಾ ಸಾಗಿದರು. ಗೋದಲಿಯಲ್ಲಿ ಸಾಮಾನ್ಯನಾಗಿ ಹುಟ್ಟಿದ ಯೇಸು ಜಗತ್ತಿನಲ್ಲಿ ತನ್ನ ಸರಳತೆಯ ಮೂಲಕ ಪ್ರೀತಿ ಶಾಂತಿ ನೆಮ್ಮದಿ ಜತೆಗೆ ಕ್ಷಮಿಸುವ ಗುಣವನ್ನು ಮೈಗೂಡಿಸಿಕೊಳ್ಳಲು ಸೂಚಿಸಿದರು. ಕ್ರೈಸ್ತರ ಪವಿತ್ರಗ್ರಂಥಗಳಲ್ಲಿ ದೇವರು ಕೋಪ ದ್ವೇಷದ ಮಾತುಗಳನ್ನು ಎಲ್ಲಿಯೂ ಆಡಿಲ್ಲ’ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.