ಮಂಗಳೂರು: ಸಿವಿಲ್ ನ್ಯಾಯಾಧೀಶೆಯಾಗಿ ಪ್ರಮಾಣವಚನ ಸ್ವೀಕರಿಸಿದ ಅಸ್ರೀನಾ ಅವರನ್ನು ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ನ ಅತ್ತಾವರದ ಕಚೇರಿಯ ಸಭಾಂಗಣದಲ್ಲಿ ಗುರುವಾರ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿವಿಲ್ ನ್ಯಾಯಾಧೀಶೆ ಅಸ್ರೀನಾ, ಜಗತ್ತಿನಲ್ಲಿ ಗೌರವಯುತವಾಗಿ ಜೀವನ ನಡೆಸಲು ಶಿಕ್ಷಣ ಅಗತ್ಯ. ಹಣದಿಂದ ಬದುಕಲು ಸಾಧ್ಯವಿಲ್ಲ. ಜ್ಞಾನ ಇರದಿದ್ದರೆ ಹಣವೂ ವ್ಯರ್ಥ. ಶಿಕ್ಷಣ ಪಡೆಯುವುದರಿಂದಲೇ ಜ್ಞಾನ ಗಳಿಸಬಹುದಾಗಿದೆ. ಯಾವುದೇ ಕ್ಷೇತ್ರವಿದ್ದರೂ ಆಳ ಜ್ಞಾನ ಪಡೆಯಬೇಕು ಎಂದು ಹೇಳಿದರು.
ಮುಸ್ಲಿಂ ಸಮುದಾಯದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಲು ಇನ್ನೂ ಹಿಂಜರಿಯುತ್ತಿರುವ ನಿದರ್ಶನಗಳಿವೆ. ಎಲ್ಲರಿಗೂ ಶಿಕ್ಷಣ ದೊರೆಯಬೇಕು. ನಿರಂತರ ಪರಿಶ್ರಮವಿದ್ದರೆ ಅಸಾಧ್ಯ ಎನ್ನುವುದು ಇಲ್ಲ. ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲ, ಜೀವನ ರೂಪಿಸಿಕೊಳ್ಳಲು ಇದೊಂದು ಅದ್ಭುತ ಅಸ್ತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾನೂನು ಕ್ಷೇತ್ರದಲ್ಲಿ ಸಲ್ಲಿಸಿದ ನಿರಂತರ ಸೇವೆಯಿಂದಲೇ ಈ ಸಿವಿಲ್ ನ್ಯಾಯಾಧೀಶೆ ಸ್ಥಾನ ಅಲಂಕರಿಸುವಂತಾಗಿದೆ. ಇಲ್ಲಿಯವರೆಗೆ ಎಲೆಮರೆ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿದ್ದೆ. ನಿರಂತರ ಶ್ರಮ ವಹಿಸಿ, ದುಡಿದರೆ ಜೀವನದಲ್ಲಿ ಎಲ್ಲವನ್ನೂ ಪಡೆದುಕೊಳ್ಳಬಹುದಾಗಿದೆ ಎಂದರು.
ಮಿಸ್ಬಾ ಮಹಿಳಾ ಕಾಲೇಜಿನ ಅಧ್ಯಕ್ಷ, ಉದ್ಯಮಿ ಬಿ.ಎಂ. ಮುಮ್ತಾಝ್ ಅಲಿ ಮಾತನಾಡಿ, ಅಸ್ರೀನಾ ಅವರನ್ನು ಅಭಿನಂದಿಸಿದರು. ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ನ ನಿರ್ದೇಶಕರಾದ ಕೆ. ಮುಹಮ್ಮದ್ ಹಾರಿಸ್, ಅಲ್ತಾಫ್, ಕೆ.ಮುಹಮ್ಮದ್ ಆರಿಫ್, ಕೆ.ಮುಹಮ್ಮದ್ ಹಾಸಿರ್, ಹಾಸಿರ್ ಅವರ ಪತ್ನಿ ಅನಿಸಾ ಇದ್ದರು. ಹುಸೈನ್ ಕಾಟಿಪಳ್ಳ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.