ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಕದಡುವ ಪ್ರಯತ್ನದ ಬಗ್ಗೆ ಕರಾವಳಿ ಜಿಲ್ಲೆಯ ಎಲ್ಲ ಶಾಸಕರು ಶೀಘ್ರದಲ್ಲೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದೇವೆ. ಪಿಎಫ್ಐ, ಎಸ್ಡಿಪಿಐ ಸಂಘಟನೆಗಳನ್ನು ನಿಷೇಧಿಸಲು ಇರುವ ಕಾನೂನು ತೊಡಕು ನಿವಾರಿಸಿ, ಶೀಘ್ರ ಕ್ರಮವಹಿಸಲು ಒತ್ತಡ ಹಾಕಲಾಗುವುದು’ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುತ್ತೂರಿನಲ್ಲಿ ಆಗಸ್ಟ್ 15ರಂದು ನಡೆದ ರಥ ಯಾತ್ರೆಗೆ ಅಡ್ಡಿಪಡಿಸಿದ ಪ್ರಕರಣ, ಉಳ್ಳಾಲದ ಕುಟುಂಬವೊಂದಕ್ಕೆ ಐಸಿಸ್ ನಂಟು, ಸ್ಯಾಟ್ಲೈಟ್ ಕರೆಯಂತಹ ಘಟನೆಗಳು ನಡೆಯುತ್ತಿವೆ. ಇಂತಹ ಘಟನೆಗಳ ಹಿಂದೆ ಯಾವುದೋ ಕಾಣದ ಶಕ್ತಿಗಳ ಕೈವಾಡ ಇರುವ ಶಂಕೆ ಇದ್ದು, ಈ ಬಗ್ಗೆ ಸಮಗ್ರ ತನಿಖೆಯಾದಾಗ ಮಾತ್ರ ಸತ್ಯಾಂಶ ಹೊರ ಬರುತ್ತದೆ’ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಾಮರಸ್ಯ ಮುರಿಯುವ ವ್ಯವಸ್ಥೆ ಮಾಡಲು ಬಿಡಲಿಲ್ಲ. ಎಲ್ಲವರ್ಗದವರು ಕೂಡ ಶಾಂತಿಯುತ ಜೀವನ ನಡೆಸಲು ಒತ್ತು ನೀಡಿದೆ. ಆದರೆ ಇತ್ತೀಚೆಗೆ ನಡೆದ ಬೆಳವಣಿಗೆ ಜಿಲ್ಲೆಯ ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನ ಮಾಡುತ್ತಿದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ಗೃಹ ಸಚಿವರಲ್ಲಿ ಈಗಾಗಲೇ ಮಾತುಕತೆ ನಡೆಸಲಾಗಿದೆ.ಜಿಲ್ಲೆಯಲ್ಲಿ ನಡೆಯುವ ಘಟನೆಗಳ ಬಗ್ಗೆ ಕಾಂಗ್ರೆಸ್ ನಾಯಕರ ಮೌನ ಅನುಮಾನ ಹುಟ್ಟಿಸುತ್ತಿದೆ ಎಂದು ಹೇಳಿದರು.
ಬಿಜೆಪಿ ಪ್ರಮುಖರಾದ ತಿಲಕ್ರಾಜ್ ಕೃಷ್ಣಾಪುರ, ಸುಮಂಗಳಾ ರಾವ್, ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.