ADVERTISEMENT

ಬಿಜೆಪಿಯೇತರ ಮತ ಸೆಳೆಯಲು ಯತ್ನ: ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 5:29 IST
Last Updated 28 ನವೆಂಬರ್ 2021, 5:29 IST
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಸಭೆಯಲ್ಲಿ ವಿಧಾನ ಪರಿಷತ್ ಅಭ್ಯರ್ಥಿ ಮಂಜುನಾಥ ಭಂಡಾರಿ ಮಾತನಾಡಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಹರೀಶ್ ಕುಮಾರ್ ಇದ್ದರು.
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಸಭೆಯಲ್ಲಿ ವಿಧಾನ ಪರಿಷತ್ ಅಭ್ಯರ್ಥಿ ಮಂಜುನಾಥ ಭಂಡಾರಿ ಮಾತನಾಡಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಹರೀಶ್ ಕುಮಾರ್ ಇದ್ದರು.   

ಮೂಡುಬಿದಿರೆ: ‘ಚುನಾವಣೆ ವೇಳೆ ಪಕ್ಷದ ಟಿಕೆಟ್ ಕೇಳುವ ಹಕ್ಕು ಎಲ್ಲರಿಗೂ ಇದೆ. ಆದರೆ ಪಕ್ಷದ ಸಿದ್ಧಾಂತಗಳನ್ನು ಬಲಿಕೊಟ್ಟು ಘಟಾನುಘಟಿಗಳಿಗೆ ಮಣೆ ಹಾಕುವ ಸಂದರ್ಭ ಬಂದಾಗ ನಮಗೆಲ್ಲ ಆಕ್ರೋಶವಾದದ್ದು ಸಹಜ. ಕೊನೆಗೂ ಪಕ್ಷದ ಹೈಕಮಾಂಡ್ ನಿಷ್ಠಾವಂತರನ್ನು ಗುರುತಿಸಿದ್ದು, ನನಗೆ ಅವಕಾಶ ಸಿಕ್ಕಿದೆ’ ಎಂದು ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಹೇಳಿದರು.

ಇಲ್ಲಿನ ಸಮಾಜ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ಪಕ್ಷದ ಬೆಂಬಲಿತ ಚುನಾಯಿತ ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ಬಿಜೆಪಿಗೆ ಗೆಲುವಿಗೆ ಬೇಕಾಗುವಷ್ಟು ಮತಗಳಿವೆ. ಹಾಗೆಂದು ಕಾಂಗ್ರೆಸ್‌ಗೆ ನಿರಾಶದಾಯಕ ಸ್ಥಿತಿ ಇಲ್ಲ. ಕಾಂಗ್ರೆಸ್ ಸೇರಿದಂತೆ ಬಿಜೆಪಿಯೇತರ ಚುನಾಯಿತ ಸದಸ್ಯರ ಮತಗಳನ್ನು ಸೆಳೆದು ಪಕ್ಷ ಗೆಲ್ಲಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ‘ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದವರು ಬಹಳ ಮಂದಿ ಇದ್ದಾರೆ. ಅವರ ಮತಗಳು ನಮ್ಮ ಅಭ್ಯರ್ಥಿ ಸಿಗುವಂತೆ ಮಾಡಬೇಕು. ಮಂಜುನಾಥ ಭಂಡಾರಿ 1978ರಿಂದಲೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಅವರಿಗೆ ಸಿಗಬೇಕಾದ ಮತಗಳು ವ್ಯರ್ಥ ಆಗಬಾರದು’ ಎಂದರು. ‌

ADVERTISEMENT

ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್, ಕಾಂಗ್ರೆಸ್ ಪ್ರಮುಖರಾದ ವಲೇರಿಯನ್ ಸಿಕ್ವೇರಾ, ಜಯಕುಮಾರ್ ಶೆಟ್ಟಿ, ಪುರಂದರ ದೇವಾಡಿಗ, ಸುಪ್ರಿಯಾ ಡಿ. ಶೆಟ್ಟಿ, ರಾಜೇಶ್ ಕಡಲಕೆರೆ ಇದ್ದರು.

ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ನಿತಿನ್ ಬೆಳುವಾಯಿ ಅವರನ್ನು ನೇಮಕ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.