ಕೇಂದ್ರ ಸರ್ಕಾವು ಬಜೆಟ್ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಪಾಲಿಕೆ ಕಚೇರಿ ಬಳಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಖಾಲಿ ಚೊಂಬುಗಳನ್ನು ಪ್ರದರ್ಶಿಸಲಾಯಿತು
– ಪ್ರಜಾವಾಣಿ ಚಿತ್ರ
ಮಂಗಳೂರು: ಕೇಂದ್ರ ಸರ್ಕಾರ 2024–25ನೇ ಸಾಲಿನ ಬಜೆಟ್ನಲ್ಲಿ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪಾಲಿಕೆ ಕಚೇರಿ ಬಳಿ ಶನಿವಾರ ಪ್ರತಿಭಟನೆ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್, ‘ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ, ನೋಟ್ ನಿಷೇಧ, ಸಮಾನ ನಾಗರಿಕ ಸಂಹಿತೆ (ಸಿಎಎ) ಜಾರಿ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಮೊದಲಾದ ಜನವಿರೋಧ ಕಾರ್ಯಕ್ರಮಗಳಷ್ಟೇ ಬಿಜೆಪಿ ಸಾಧನೆ. ಎನ್ಡಿಎ ನೇತೃತ್ವದ ಸರ್ಕಾರದ ಪ್ರತಿಯೊಂದು ಬಜೆಟ್ ದೇಶದ ಆರ್ಥಿಕತೆಗೆ ಪೆಟ್ಟು ನೀಡಿದೆ. ಹತ್ತು ವರ್ಷಗಳಿಂದ ನಿರುದ್ಯೋಗದ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಬೆಲೆ ಏರಿಕೆ ಮಾಮೂಲಿ ಎಂಬಂತಾಗಿದೆ. ಲಕ್ಷಾಂತರ ಕೋಟಿ ಸಾಲ ಪಡೆಯುವ ಮೂಲಕ ದೇಶವು ಸಾಲದ ಸುಳಿಯಲ್ಲಿ ಸಿಕ್ಕಿದೆ. ಆದರೆ ಅಭಿವೃದ್ಧಿ ಮರೀಚಿಕೆಯಾಗಿದೆ’ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ‘ಇದು ಕುರ್ಚಿ ಉಳಿಸಿಕೊಳ್ಳುವ ಬಜೆಟ್. ನಮ್ಮರಾಜ್ಯದ ಯಾವುದೇ ಯೋಜನೆಗಳಿಗೆ ಅನುದಾನವನ್ನೇ ನೀಡಿಲ್ಲ. ನಮಗೆ ಕೊಟ್ಟಿದ್ದು ಚೊಂಬು ಮಾತ್ರ. ಕೇಂದ್ರವು ಮಾಡಿದ ಅನ್ಯಾಯ ತೆರಿಗೆ ವಂಚನೆಗೆ ಸಮ’ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ‘ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ರಾಜ್ಯದ ಐವರು ಮಂತ್ರಿಗಳಿದ್ದಾರೆ. ಅವರಿಂದ ರಾಜ್ಯಕ್ಕೆ ಏನೂ ಪ್ರಯೋಜನವಾಗಿಲ್ಲ. ದೇಶದಲ್ಲಿ ಜಿಎಸ್ಟಿ ಅತಿ ಹೆಚ್ಚು ಸಂಗ್ರಹವಾಗುವ ರಾಜ್ಯಗಳಲ್ಲಿ ನಮ್ಮದು ಎರಡನೇ ಸ್ಥಾನದಲ್ಲಿದೆ. ಆದರೂ ರಾಜ್ಯಕ್ಕೆ ಕೊಡಬೇಕಾದಷ್ಟು ಪಾಲನ್ನು ಬಜೆಟ್ನಲ್ಲಿ ಕೊಟ್ಟಿಲ್ಲ. ಇದನ್ನು ಪ್ರತಿಯೊಬ್ಬರು ಪ್ರಶ್ನಿಸಬೇಕು’ ಎಂದರು.
ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಪಕ್ಷದ ಮುಖಂಡರಾದ ಅಭಯಚಂದ್ರ ಜೈನ್, ಸುರೇಶ್ ಬಲ್ಲಾಳ್, ಶಾಲೆಟ್ ಪಿಂಟೊ, ವಿಶ್ವಾಸ್ ದಾಸ್, ಶಶಿಧರ ಹೆಗ್ಡೆ, ಎಂ.ಎಸ್.ಮಹಮ್ಮದ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.