ADVERTISEMENT

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಡಿಕೆ ಆಮದು ಸ್ಥಗಿತ: ಜೆ.ಆರ್‌.ಲೋಬೊ

ಅಡಿಕೆ ಬೆಳೆಗಾರರ ಕಡೆಗಣನೆ ಆರೋಪ: ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2022, 13:47 IST
Last Updated 31 ಡಿಸೆಂಬರ್ 2022, 13:47 IST
ಪ್ರತಿಭಟನೆಯಲ್ಲಿ ಹರೀಶ್‌ ಕುಮಾರ್‌ ಮಾತನಾಡಿದರು. ಶಶಿಧರ ಹೆಗ್ಡೆ, ಜೆ.ಆರ್‌.ಲೋಬೊ, ಶಾಲೆಟ್‌ ಪಿಂಟೊ ಮತ್ತಿತರರು ಇದ್ದಾರೆ –ಪ್ರಜಾವಾಣಿ ಚಿತ್ರ
ಪ್ರತಿಭಟನೆಯಲ್ಲಿ ಹರೀಶ್‌ ಕುಮಾರ್‌ ಮಾತನಾಡಿದರು. ಶಶಿಧರ ಹೆಗ್ಡೆ, ಜೆ.ಆರ್‌.ಲೋಬೊ, ಶಾಲೆಟ್‌ ಪಿಂಟೊ ಮತ್ತಿತರರು ಇದ್ದಾರೆ –ಪ್ರಜಾವಾಣಿ ಚಿತ್ರ   

ಮಂಗಳೂರು: ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಡಿಕೆ ಆಮದನ್ನು ಸಂಪೂರ್ಣ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಿದೆ. ಇದರಿಂದ ಅಡಿಕೆಯ ದರವು ಹೆಚ್ಚಳವಾಗಿ, ಬೆಳೆಗಾರರಿಗೆ ಅನುಕೂಲವಾಗಲಿದೆ’ ಎಂದು ಕಾಂಗ್ರೆಸ್‌ ಮುಖಂಡ ಜೆ.ಆರ್‌.ಲೋಬೊ ಹೇಳಿದರು.

‘ಅಡಿಕೆ ಬೆಳೆಗೆ ಉತ್ತೇಜನ ನೀಡಬಾರದು’ ಎಂದು ವಿಧಾನಮಂಡಲ ಅಧಿವೇಶನದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ನೀಡಿದ ಹೇಳಿಕೆ ಖಂಡಿಸಿ ಹಾಗೂಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಯಿಂದ ಅಡಿಕೆ ಬೆಳೆಗಾರರಿಗೆ ಹಾನಿ ಆಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಪಕ್ಷವು ಇಲ್ಲಿ ಶನಿವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರ ಬೆಂಬಲದಿಂದ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಆದರೆ ಅವರ ಸಮಸ್ಯೆಗಳ ಬಗ್ಗೆ ಆಡಳಿತವ ಪಕ್ಷದ ಶಾಸಕರು ಕುರುಡರಾಗಿದ್ದಾರೆ. ಅಡಿಕೆಗೆ ಬೆಂಬಲ ಬೆಲೆ ನೀಡುವುದು ಹಾಗೂ ಕೊಳೆ ರೋಗ, ಎಲೆಚುಕ್ಕಿ ರೋಗದಿಂದ ಸಮಸ್ಯೆ ಎದುರಿಸುತ್ತಿರುವ ರೈತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಮೌನವಹಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್, ‘ಅಡಿಕೆ ಬೆಳೆಗೆ ಭವಿಷ್ಯ ಇಲ್ಲ ಎಂಬ ಗೃಹಸಚಿವರ ಹೇಳಿಕೆ ಮೂರ್ಖತನದ ಪರಮಾವಧಿ. ಈ ಹೇಳಿಕೆಯನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ‘ಲಾಭಗಳಿಕೆಗೆ ಆದ್ಯತೆ ನೀಡುತ್ತಿರುವ ಕ್ಯಾಂಪ್ಕೊ ಅಡಿಕೆ ದರ ಕುಸಿತದಿಂದ ಕಂಗಾಲಾಗಿರುವ ಬೆಳೆಗಾರರ ನೆರವಿಗೆ ಧಾವಿಸಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ಗಳು ಅಡಿಕೆ ಬೆಳೆಗಾರರ ಹಿತವನ್ನು ಕಡೆಗಣಿಸಿದ್ದರೂ ಬಿಜೆಪಿ ಮುಖಂಡರಾದ ಸದಾನಂದ ಗೌಡ ಶೋಭಾ ಕರಂದ್ಲಾಜೆಯಂತಹ ನಾಯಕರು ಸೊಲ್ಲೆತ್ತಿಲ್ಲ’ ಎಂದು ಟೀಕಿಸಿದರು.

ಪಾಲಿಕೆ ಸದಸ್ಯರಾದ ನವೀನ್ ಡಿಸೋಜ, ಶಶಿಧರ್ ಹೆಗ್ಡೆ, ಅಬ್ದುಲ್ ರವೂಫ್, ಅಬ್ದುಲ್ ಲತೀಫ್, ಶಂಸುದ್ದಿನ್, ಅಶ್ರಫ್ ಬಜಾಲ್ ಪಕ್ಷದ ಮುಖಂಡರಾದ ಪ್ರಕಾಶ್ ಸಾಲ್ಯಾನ್, ಶಾಲೆಟ್ ಪಿಂಟೊ, ಟಿ.ಕೆ.ಸುಧೀರ್, ನಜೀರ್ ಬಜಾಲ್, ನೀರಜ್ ಪಾಲ್, ಚೇತನ್, ರೀತೇಶ್, ಹೊನ್ನಯ್ಯ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.