ಮಂಗಳೂರು: ‘ಈ ದೇಶಕ್ಕೆ ಒಬ್ಬರೇ ಮಹಾತ್ಮ, ಅವರು ಮಹಾತ್ಮ ಗಾಂಧೀಜಿ. ಬೇರೆ ಯಾರನ್ನೂರಾಷ್ಟ್ರಪಿತನೆಂದು ಗೌರವಿಸುವುದಿಲ್ಲ. ಅವರಿಗೆ ಮಾತ್ರ ದೇಶದಲ್ಲಿ ಶ್ರೇಷ್ಠವಾದ ಸ್ಥಾನಮಾನವನ್ನು ನೀಡಲಾಗಿದೆ. ಹಾಗಾಗಿ ಮಹಾತ್ಮ ಗಾಂಧೀಜಿ ಮಾಡಿರುವ ಅವಮಾನವನ್ನು ಸಹಿಸಲಾಗದು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಹರೀಶ್ ಕುಮಾರ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತದ ವತಿಯಿಂದ ನೆಹರೂ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಮಾಡಿದ ಭಾಷಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೆಸರನ್ನು ಕೊನೆಯಲ್ಲಿಉಲ್ಲೇಖಿಸಿದ್ದಾರೆಂದು ಆಕ್ಷೇಪಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಪುರಭವನದ ಎದುರಿನಗಾಂಧಿ ಪ್ರತಿಮೆ ಎದುರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯಕ್ಕಾಗಿ ಅಹಿಂಸಾತ್ಮಕವಾಗಿ ಹೋರಾಡಿದ ಹೋರಾಟಗಾರರಲ್ಲಿ ಮುಂಚೂಣಿಯಲ್ಲಿರುವ ಮಹಾತ್ಮ ಗಾಂಧಿಯನ್ನು ಅವಹೇಳನ ಮಾಡುವ ಕೆಲಸ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಿರುವುದು ನೋವಿನ ಸಂಗತಿ. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ. ಸರ್ಕಾರ ಈ ಬಗ್ಗೆ ಕ್ಷಮೆ ಯಾಚಿಸಬೇಕುಎಂದು ಒತ್ತಾಯಿಸಿದರು.
ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ‘ಮಹಾತ್ಮ ಗಾಂಧಿ ದೇಶದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮೊದಲಿಗರು. ವಿಶ್ವದ 30 ರಾಷ್ಟ್ರಗಳು ಮಹಾತ್ಮ ಗಾಂಧಿ ಹೆಸರಿನಲ್ಲಿ ಅಂಚೆಚೀಟಿ ಬಿಡುಗಡೆಗೊಳಿಸಿವೆ. ಇಂತಹ ಮಹಾತ್ಮರಿಗೆ ಮಾಡುವ ಅವಮಾನವನ್ನು ಕಾಂಗ್ರೆಸ್ ವಿರೋಧಿಸುತ್ತದೆ’ ಎಂದರು.
ಪುರಭವನದ ಎದುರಿನ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಗಾಂಧಿ ಪಾರ್ಕ್ನಲ್ಲಿರುವ ಗಾಂಧಿ ಪ್ರತಿಮೆ ಸುತ್ತಮುತ್ತ ಸ್ಮಾರ್ಟ್ ಸಿಟಿ ಕಾಮಗಾರಿಯ ಸಾಮಗ್ರಿಗಳು ರಾಶಿ ಬಿದ್ದಿದ್ದು, ಸ್ವಾತಂತ್ರ್ಯೋತ್ಸವದಿನಾಚರಣೆಯಂದು ಕೂಡ ಅದನ್ನು ತೆರವುಗೊಳಿಸಿ ಶುಚಿಗೊಳಿಸುವ ಗೋಜಿಗೆಪಾಲಿಕೆ ಆಡಳಿತ ಮುಂದಾಗಿಲ್ಲ ಎಂದು ಕೆಲವರು ದೂರಿದರು.
ಮಾಜಿ ಸಚಿವ ರಮಾನಾಥ ರೈ, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಮುಖಂಡರಾದ ಸದಾಶಿವ ಉಳ್ಳಾಲ್, ಸಾಹುಲ್ ಹಮೀದ್, ವಿಶ್ವಾಸ್ ದಾಸ್, ಲುಕ್ಮಾನ್ ಬಂಟ್ವಾಳ, ಸೌಆದ್ ಸುಳ್ಯ, ಸಂತೋಷ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್, ಸದಾಶಿವ ಶೆಟ್ಟಿ, ಶಶಿಧರ ಹೆಗ್ಡೆ, ಭಾಸ್ಕರ್ ಮೊಯ್ಲಿ, ನವೀನ್ ಡಿಸೋಜ, ಪ್ರವೀಣ್ಚಂದ್ರ ಆಳ್ವ, ಶುಭೋದಯ ಆಳ್ವ, ಟಿ.ಕೆ. ಸುಧೀರ್, ಗಣೇಶ್ ಪೂಜಾರಿ, ಸಂಶುದ್ದೀನ್ ಕುದ್ರೋಳಿ, ಪ್ರತಿಭಾ ಕುಳಾಯಿ, ಅಪ್ಪಿ, ರಜನೀಶ್ ಕಾಪಿಕಾಡ್, ನಝೀರ್ ಬಜಾಲ್, ರಮಾನಂದ ಪೂಜಾರಿ, ಸುನಿಲ್ ಪೂಜಾರಿ, ರಾಕೇಶ್ ದೇವಾಡಿಗ, ಶಬೀರ್, ವಿವೇಕ್ರಾಜ್, ಭಾಸ್ಕರ ರಾವ್, ಗಿರೀಶ್ ಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.