ADVERTISEMENT

ವರ್ಚಸ್ವಿ ನಾಯಕರ ಕ್ಷೇತ್ರಗಳಲ್ಲಿ ಭ್ರಷ್ಟಾಚಾರದ ಜನಜಾಗೃತಿ: ಯು.ಪಿ.ಶಿವಾನಂದ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2023, 6:10 IST
Last Updated 6 ಏಪ್ರಿಲ್ 2023, 6:10 IST

ಮಂಗಳೂರು: ‌‘ರಾಜ್ಯದಲ್ಲಿ ಮುಖ್ಯಮಂತ್ರಿ ಆಗುವ ಸಾಧ್ಯತೆ ಇರುವ ವರ್ಚಸ್ವೀ ನಾಯಕರಾದ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ, ಡಿ.ಕೆ.ಶಿವಕುಮಾರ್‌, ಎಚ್‌.ಡಿ.ಕುಮಾರಸ್ವಾಮಿ ಅವರು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಜನಜಾಗೃತಿ ನಡೆಸಲಿದ್ದೇವೆ’ ಎಂದು ಸುದ್ದಿ ಜನಾಂದೋಲನ ವೇದಿಕೆಯ ಡಾ.ಯು.ಪಿ.ಶಿವಾನಂದ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಭ್ರಷ್ಟಾಚಾರ ಸಂಪೂರ್ಣ ನಿಲ್ಲಬೇಕು. ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಲಂಚ ನೀಡದೇ ಜನ ಕೆಲಸ ಮಾಡಿಸಿಕೊಳ್ಳಲು ಆಗದಿದ್ದರೆ ಅಂತಹ ಜನಪ್ರತಿನಿಧಿಗಳಿದ್ದೂ ಪ್ರಯೋಜನವಿಲ್ಲದಂತೆ. ಯಾವುದೇ ಅಧಿಕಾರಿ ಲಂಚ ಪಡೆದರೆ ಅದನ್ನು ಮರಳಿ ಕೊಡಿಸುವಂತಹ ಜನನಾಯಕರು ಬೇಕು’ ಎಂದರು.

‘ಮುಖ್ಯಮಂತ್ರಿಯಾಗುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕ್ಷೇತ್ರದ ಮತದಾರರಲ್ಲಿ ಭ್ರಷ್ಟಾಚಾರರಹಿತ ವ್ಯವಸ್ಥೆ ರೂಪಿಸುವ ಬಗ್ಗೆ ಜಾಗೃತಿ ಮೂಡಬೇಕು. ಅಲ್ಲಿನ ಮತದಾರರು ತಾವು ಗೆಲ್ಲಿಸುವ ಅಭ್ಯರ್ಥಿಯನ್ನು ಈ ವಿಚಾರದಲ್ಲಿ ಪ್ರಶ್ನೆ ಮಾಡುವಂತಾಗಬೇಕು. ಆ ಉದ್ದೇಶಕ್ಕಾಗಿಯೇ ನಾನು ಜನಜಾಗೃತಿಗಾಗಿ ಇಂತಹ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದರು.

ADVERTISEMENT

‘ಮೀಸಲು ಕ್ಷೇತ್ರ ಪ್ರತಿ ಚುನಾವಣೆಗೂ ಬದಲಾಗಲಿ’

‘ಮೀಸಲು ಕ್ಷೇತ್ರಗಳು ಪ್ರತಿ ಚುನಾವಣೆಯಲ್ಲೂ ಬದಲಾಗುವಂತಹ ವ್ಯವಸ್ಥೆ ರೂಪಿಸುವ ಅಗತ್ಯ ಇದೆ’ ಎಂದು ಡಾ.ಯು.ಪಿ.ಶಿವಾನಂದ ಪ್ರತಿಪಾದಿಸಿದರು.

‘ಮೀಸಲು ಕ್ಷೇತ್ರ ಬದಲಾಗದಿದ್ದರೆ, ಅಲ್ಲಿ ಸಾಮಾನ್ಯ ವರ್ಗದವರು ನಾಯಕರಾಗಿ ಬೆಳೆಯಲು ಅವಕಾಶವೇ ಸಿಗುವುದಿಲ್ಲ. ಈ ಕ್ಷೇತ್ರಗಳಲ್ಲಿ ಜನನಾಯಕರಾಗಿ ಬೆಳೆಯಲು ಅರ್ಹತೆ ಇರುವ ಸಾಮಾನ್ಯ ವರ್ಗದವರೂ ಬೇರೆ ಕ್ಷೇತ್ರಕ್ಕೆ ಹೋಗಿ ಗೆಲ್ಲುವುದು ಸುಲಭವಲ್ಲ’ ಎಂದರು.

‘ಸುಳ್ಯ 70 ವರ್ಷಗಳಿಂದಲೂ ಮೀಸಲು ಕ್ಷೇತ್ರವಾಗಿಯೇ ಉಳಿದಿದೆ. ಇದು ಸಾಮಾನ್ಯ ವರ್ಗದ ಕ್ಷೇತ್ರವಾಗಬೇಕು. ಆ ಬಳಿಕ, ಎಸ್‌.ಅಂಗಾರರಂತಹ ನಾಯಕರು ಗೆದ್ದು ಬರಬೇಕು’ ಎಂದರು.

ಸುದ್ದಿಗೋಷ್ಠಿಯಲ್ಲಿ ಹರೀಶ್‌ ಬಂಟ್ವಾಳ್‌, ಸೃಜನ್‌ ಉರುವೈಲ್‌, ಮೊಹಮ್ಮದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.