ADVERTISEMENT

ಬಾಲಕನ ಅಪಹರಣ: ಆರೋಪಿ ಮಹಿಳೆಯ ಪತಿ ಬಂಧನ

ಮಾದಕ ದ್ರವ್ಯ ವ್ಯಸನಿ ಮಹಿಳೆಯ ಕೃತ್ಯ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 20:00 IST
Last Updated 15 ಸೆಪ್ಟೆಂಬರ್ 2019, 20:00 IST
ಮಹೇಶ್
ಮಹೇಶ್   

ಪುತ್ತೂರು: ‘ಏಳು ವಯಸ್ಸಿನ ಬಾಲಕನನ್ನು ಬೆಂಗಳೂರಿನ ಯಲಹಂಕದ ರೈಲ್ವೆ ನಿಲ್ದಾಣದಿಂದ ಅಪಹರಿಸಿ ತಂದು ಪುತ್ತೂರು ತಾಲ್ಲೂಕಿನ ಬಲ್ನಾಡು ಗ್ರಾಮದ ಚನಿಲ ಎಂಬಲ್ಲಿನ ಕಾರ್ಮಿಕ ಪೂರೈಕೆಯ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಇರಿಸಿ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸರು ಪುತ್ತೂರು ತಾಲ್ಲೂಕಿನ ಕಬಕ ಗ್ರಾಮದ ವಿದ್ಯಾಪುರ ನಿವಾಸಿಯಾಗಿರುವ ಮಹೇಶ ಎಂಬಾತನನ್ನು ಭಾನುವಾರ ಬಂಧಿಸಿದ್ದಾರೆ.

ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸರು ಬೆಂಗಳೂರಿನ ಬನಶಂಕರಿಯ ಶಿಲ್ಪಾ ಮತ್ತು ಆಕೆಯ ಪತಿ ಕಬಕ ಗ್ರಾಮದ ವಿದ್ಯಾಪುರ ನಿವಾಸಿ ಮಹೇಶ್ ಎಂಬಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಸಂಪ್ಯ ಠಾಣಾ ಎಸ್‍ಐ ಸಕ್ತಿವೇಲು ನೇತೃತ್ವದ ಪೊಲೀಸರು ಭಾನುವಾರ ಆರೋಪಿ ಮಹೇಶನನ್ನು ಕಬಕ ಎಂಬಲ್ಲಿಂದ ಬಂಧಿಸಿದ್ದಾರೆ. ಆರೋಪಿಯನ್ನು ಪೊಲೀಸರು ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ADVERTISEMENT

‘ವ್ಯಸನಿ ಮಹಿಳೆಗೆ ಚಿಕಿತ್ಸೆ’: ಅಪಹರಿಸಿಕೊಂಡು ಬಂದ ಬಾಲಕನನ್ನು ಪುತ್ತೂರು ತಾಲ್ಲೂಕಿನ ಬಲ್ನಾಡು ಗ್ರಾಮದ ಚನಿಲ ನಿವಾಸಿ ಕೂಲಿ ಕಾರ್ಮಿಕರ ಪೂರೈಕೆಯ ಗುತ್ತಿಗೆದಾರ ಮಂಜುನಾಥ್ ರೈ ಎಂಬವರ ಮನೆಯಲ್ಲಿ ಇರಿಸಿ ಹೋಗಿದ್ದ ಆರೋಪಿ ಶಿಲ್ಪ , ಕೃತ್ಯ ಬಹಿರಂಗದ ಬಳಿಕ ಅನಾರೋಗ್ಯದ ಕಾರಣದಿಂದಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಇದೀಗ ಆಕೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾಳೆ. ಆದರೆ ಮಾದಕ ದ್ರವ್ಯ ವ್ಯಸನಿಯಾಗಿರುವ ಆಕೆ ವಿಚಾರಣೆಗೊಳಪಡಿಸುವ ಸ್ಥಿತಿಯಲ್ಲಿರದ ಕಾರಣ ಪೊಲೀಸರು ಆಕೆಯನ್ನು ಬಂಧಿಸಲು ಮುಂದಾಗಿಲ್ಲ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.