ADVERTISEMENT

ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ದಕ್ಷಿಣ ಕನ್ನಡ ಎಂದರೆ ಅಲರ್ಜಿ: ವಿಜಯೇಂದ್ರ

ಸರ್ಕಾರಕ್ಕೆ ಬುದ್ಧಿ ಕಲಿಸದೇ ಬಿಡುವುದಿಲ್ಲ ಎಂದು ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 15:30 IST
Last Updated 15 ಅಕ್ಟೋಬರ್ 2024, 15:30 IST
<div class="paragraphs"><p>ಜನಪ್ರತಿನಿಧಿಗಳ ಸಮಾವೇಶದಲ್ಲಿ ಬಿಜೆಪಿ ಸೇರ್ಪಡೆಯಾದ ನೆಲ್ಯಾಡಿ ಗ್ರಾಮ ಪಂಚಾಯಿತಿ ಸದಸ್ಯ ಜಯಾನಂದ ನೆಲ್ಯಾಡಿ ದಂಪತಿಗೆ ಬಿ.ವೈ.ವಿಜಯೇಂದ್ರ ಪಕ್ಷದ ಧ್ವಜ ಹಸ್ತಾಂತರಿಸಿದರು.  </p></div>

ಜನಪ್ರತಿನಿಧಿಗಳ ಸಮಾವೇಶದಲ್ಲಿ ಬಿಜೆಪಿ ಸೇರ್ಪಡೆಯಾದ ನೆಲ್ಯಾಡಿ ಗ್ರಾಮ ಪಂಚಾಯಿತಿ ಸದಸ್ಯ ಜಯಾನಂದ ನೆಲ್ಯಾಡಿ ದಂಪತಿಗೆ ಬಿ.ವೈ.ವಿಜಯೇಂದ್ರ ಪಕ್ಷದ ಧ್ವಜ ಹಸ್ತಾಂತರಿಸಿದರು.

   

ಪ್ರಜಾವಾಣಿ ಚಿತ್ರ

ಬಂಟ್ವಾಳ: 'ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಅಲರ್ಜಿ. ಏಕೆಂದರೆ, ಇಲ್ಲಿನ ಜನರ ರಕ್ತದ ಕಣ ಕಣದಲ್ಲಿ ಹಿಂದುತ್ವ ರಕ್ತ ಹರಿಯುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ADVERTISEMENT

ಸ್ಥಳೀಯ ಸಂಸ್ಥೆಗಳಿಂದ‌ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಉಪಚುನಾವಣೆ ಸಲುವಾಗಿ ಇಲ್ಲಿನ ತುಂಬೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಪ್ರತಿನಿಧಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಜಿಲ್ಲಾ ಉಸ್ತುವಾರಿ ಸಚಿವರನ್ನು ಹೊರತುಪಡಿಸಿ, ಸರ್ಕಾರದ ಯಾವೊಬ್ಬ ಸಚಿವರೂ ಈ ಜಿಲ್ಲೆಗೆ ಭೇಟಿ ನೀಡುವುದಿಲ್ಲ. ಏಕೆಂದರೆ ಇಲ್ಲಿನ ಜನ ಕಾಂಗ್ರೆಸ್‌ಗೆ ವೋಟು ನೀಡುವುದಿಲ್ಲ ಎಂದು ಅವರಿಗೆ ತಿಳಿದಿದೆ’ ಎಂದರು.

‘ಹಿಂದೂ ಹಬ್ಬಗಳ ಆಚರಣೆಗೆ ಸರ್ಕಾರ ಹತ್ತಾರು ನಿಯಮ ರೂಪಿಸಿದೆ. ಗಣೇಶೋತ್ಸವಕ್ಕೂ ಸಂಘಟಕರು ನಿರಕ್ಷೇಪಣಾ ಪತ್ರ ತರಬೇಕು ಎನ್ನುವ ಕೆಟ್ಟ ಬುದ್ಧಿ ಈ ಸರ್ಕಾರಕ್ಕೆ ಏಕೆ ಬಂತೋ ತಿಳಿಯದು. ಬಜರಂಗದಳದವರನ್ನು ದೇಶದ್ರೋಹಿಗಳೆನ್ನುವ ಹಾಗೂ ಪಾಕಿಸ್ತಾನ್‌ ಜಿಂದಾಬಾದ್ ಎನ್ನುವವರನ್ನು ದೇಶಪ್ರೆಮಿಗಳಂತೆ ಕಾಣುವ ಇವರಿಗೆ ತಕ್ಕ ಉತ್ತರ ನೀಡಬೇಕಲ್ಲವೇ. ಇನ್ನು  ನಾವು ಕೈ ಕಟ್ಟಿ ಸುಮ್ಮನೆ ಕೂರುವುದಿಲ್ಲ. ಇಂತಹ ಹಿಂದೂ ವಿರೋಧಿ, ರೈತ ವಿರೋಧಿ ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೆ ಬುದ್ಧಿ ಕಲಿಸದೇ ಬಿಡುವುದಿಲ್ಲ’ ಎಂದು ಹೇಳಿದರು. 

‘ಈ ಉಪ ಚುನಾವಣೆಗೆ ಕಿಶೋರ್ ಕುಮಾರ್ ಅವರನ್ನು ಪಕ್ಷದ ಕೋರ್ ಕಮಿಟಿಯು ಅಭ್ಯರ್ಥಿಯಾಗಿ ಆರಿಸಿದಾಗ ಮೊದಲು ಹೆಮ್ಮೆ ವ್ಯಕ್ತಪಡಿಸಿದ್ದು ನಳಿನ್ ಕುಮಾರ್ ಕಟೀಲ್. ಕಿಶೋರ್ ಗೆಲ್ಲುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ಇದೆ' ಎಂದರು.

ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ, 'ರಾಜ್ಯದಾದ್ಯಂತ ರಸ್ತೆಗಳು ಹಾಳು ಬಿದ್ದಿವೆ. ಶಾಲೆ, ಆಸ್ಪತ್ರೆಗಳ ದುರಸ್ತಿಗೂ ಇವರಲ್ಲಿ ಹಣವಿಲ್ಲ. ಈ ಸರ್ಕಾರ ತೊಲಗಿದರೆ ಮಾತ್ರ ಗ್ರಾಮ ಪಂಚಾಯಿತಿಗೆ ಅನುದಾನ ಸಿಗಲು ಸಾಧ್ಯ' ಎಂದರು.

‘ನಮ್ಮ ಅಭ್ಯರ್ಥಿ  ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದರೆ ರಾಜ್ಯ ಸರ್ಕಾರ ಬಿದ್ದುಹೋಗಲಿದೆ’ ಎಂದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಈ ಪ್ರದೇಶದಲ್ಲಿ ಪರಿಶಿಷ್ಟರ ಬಗ್ಗೆ ಪಾಪದವರು ಎಂದು ಕರುಣೆ ತೋರಿಸುತ್ತಾರೆ. ರಾಜ್ಯ ಸರ್ಕಾರ ಅಂತಹ ಪಾಪದವರ ದುಡದ್ಡು ತಿಂದಿದೆ. ಇಂತಹ ಪಾಪಿಗಳ ಸರ್ಕಾರ ಉಳಿಯಬೇಕೇ’ ಎಂದು ಪ್ರಶ್ನಿಸಿದರು.

ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ.ಬ್ರಿಜೇಶ್ ಚೌಟ, ಬಿಜೆಪಿ ರಾಜ್ಯ ಘಟಕದ ಸಹ ಪ್ರಭಾರಿ ಸುಧಾಕರ ರೆಡ್ಡಿ ಮಾತನಾಡಿದರು.

ಶಾಸಕರಾದ ವಿ. ಸುನಿಲ್ ಕುಮಾರ್, ರಾಜೇಶ್ ನಾಯ್ಕ್ ಉಳಿಪಾಡಿ, ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್‌, ಹರೀಶ್‌ ಪೂಂಜ, ಭಾಗಿರಥಿ ಮುರುಳ್ಯ, ಪ್ರತಾಪಸಿಂಹ ನಾಯಕ್, ಮಂಗಳೂರಿನ ಮೇಯರ್ ಮನೋಜ್ ಕುಮಾರ್, ಉಪಮೆಯರ್ ಭಾನುಮತಿ, ಪಕ್ಷದ ಮುಖಂಡ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಸಹಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆಳ್ವ, ಜೆಡಿಎಸ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಜಾಕೆ ಮಾಧವ ಗೌಡ ಭಾಗವಹಿಸಿದ್ದರು.  ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಕ್ಯಾ.ಗಣೇಶ ಕಾರ್ಣಿಕ್ ಧನ್ಯವಾದ ಸಲ್ಲಿಸಿದರು‌.

‘ಪಕ್ಷನಿಷ್ಠ ಕುಟುಂಬದ ಕೂಸು ಕಿಶೋರ್’

‘ಬಿಜೆಪಿ ಅಭ್ಯರ್ಥಿಯಾಗಿರುವ ಕಿಶೋರ್‌ ಕುಮಾರ್‌ ಜನಸಂಘದ ಕಾಲದಿಂದಲೂ ಪಕ್ಷಕ್ಕೆ ಬದ್ಧತೆ ಹೊಂದಿದ್ದ ‌ಕುಟುಂಬದ ಕೂಸು. ಸಣ್ಣ ಸಮುದಾಯದ ಅವರನ್ನು ಕಣಕ್ಕಿಳಿಸಿದ್ದಕ್ಕೆ ಧನ್ಯವಾದ’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

‘ಕಿಶೋರ್‌ ಅವರ ಅಪ್ಪ ರಾಮಣ್ಣ ಭಂಡಾರಿಯವರು ಕಾಂಗ್ರೆಸ್‌ ಭದ್ರ ಕೋಟೆಯಾಗಿದ್ದ ಸರ್ವೆ ಗ್ರಾಮದಲ್ಲಿ ಜನಸಂಘವನ್ನು ಕಟ್ಟಿದವರು. ಕಿಶೋರ್ ಅವರ ಚಿಕ್ಕಪ್ಪ ಸದಾಶಿವ ಭಂಡಾರಿ ಸಣ್ಣ ಕ್ಷೌರದಂಗಡಿ ನಡೆಸುತ್ತಲೇ ಕಾಂಗ್ರೆಸ್‌ನ ಗೂಡಾಗಿರಿಗೆ ಅಂಜದೇ ಪಕ್ಷಕ್ಕಾಗಿ ದುಡಿದವರು’ ಎಂದರು.

ಗ್ರಾಮ ಪಂಚಾಯಿತಿಯ ಸಮಸ್ಯೆಗಳಿಗೆ ಗಟ್ಟಿ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಗೆದ್ದ ಮೂರು ತಿಂಗಳಲ್ಲೇ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ.
-ಕಿಶೋರ್ ಕುಮಾರ್‌, ಬಿಜೆಪಿ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.