ಮಂಗಳೂರಿನಲ್ಲಿ ಬುಧವಾರ ನಡೆದ ಸೌಹಾರ್ದ ಸಭೆಯಲ್ಲಿ ಜಿ.ಪರಮೇಶ್ವರ ಮಾತನಾಡಿದರು. ದಿನೇಶ್ ಗುಂಡೂರಾವ್, ಯು.ಟಿ. ಖಾದರ್, ಕ್ಯಾ.ಬ್ರಿಜೇಶ್ ಚೌಟ, ಸುಧೀರ್ ಕುಮಾರ್ ರೆಡ್ಡಿ, ಅರುಣ್ ಕೆ. ಭಾಗವಹಿಸಿದ್ದರು
ಪ್ರಜಾವಾಣಿ ಚಿತ್ರ
ಮಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮಗಳ ವಿರುದ್ಧ ದ್ವೇಷ ಹಬ್ಬಿಸುವುದು, ಬೇರೆ ಧರ್ಮಗಳ ಅವಹೇಳನ, ಸುಳ್ಳು ಸುದ್ದಿ ಹರಡುವುದು, ದ್ವೇಷ ಭಾಷಣ... ಜಿಲ್ಲೆಯ ಸಾಮರಸ್ಯ ಕದಡುವ ಪ್ರತಿಯೊಂದು ನಡೆಯನ್ನೂ ಮಟ್ಟ ಹಾಕಬೇಕು. ಡ್ರಗ್ಸ್, ಜೂಜು, ಮರಳು ದಂಧೆ ಮತ್ತಿತರ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕು. ತಾರತಮ್ಯ ಮಾಡದೇ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಬೇಕು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ಕಾಪಾಡುವ ಕುರಿತು ಚರ್ಚಿಸಲು ಗೃಹ ಸಚಿವ ಜಿ.ಪರಮೇಶ್ವರ ನೇತೃತ್ವದಲ್ಲಿ ಇಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ವ್ಯಕ್ತವಾದ ಒಟ್ಟಾಭಿಪ್ರಾಯವಿದು.
ರಾಜಕೀಯ ಪಕ್ಷದವರು, ಶಿಕ್ಷಣ–ಧಾರ್ಮಿಕ ಸಂಘ ಸಂಸ್ಥೆಗಳು ಮತ್ತು ವಿವಿಧ ಸಮುದಾಯಗಳ ಮುಖಂಡರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ಅನಿವಾರ್ಯವನ್ನು ಒತ್ತಿ ಹೇಳಿದರು.
ಕೋಮು ಹಿಂಸೆಯಲ್ಲಿ ತೊಡಗುವವರ ಜೊತೆಗೆ ಅವರ ಮನಸ್ಸಿನಲ್ಲಿ ದ್ವೇಷ ತುಂಬುವುದಕ್ಕೆ ಕಾರಣವಾಗುವ ಸೂತ್ರಧಾರಿಗಳ ವಿರುದ್ಧವೂ ಕ್ರಮವಾಗಬೇಕು. ಕೋಮು ಹತ್ಯೆಗಳಿಗೆ ಹಣಕಾಸು ನೆರವು ನೀಡುವವರನ್ನು ಗುರುತಿಸಿ ಸದೆಬಡಿಯಬೇಕು ಎಂದೂ ಕೆಲವರು ಒತ್ತಾಯಿಸಿದರು. ಸರ್ಕಾರದ ಹಾಗೂ ಪೊಲೀಸರ ನಡೆಗಳು ತಾರತಮ್ಯದಿಂದ ಕೂಡಿದ್ದರೆ ಹೇಗೆ ಅದು ಅಪನಂಬಿಕೆ ಮೂಡಿಸುತ್ತದೆ. ಗೋಹತ್ಯೆಯಂತಹ ವಿಚಾರ ಹೇಗೆ ಘರ್ಷಣೆಗೆ ಕಾರಣವಾಗುತ್ತದೆ ಎಂದು ಬಿಜೆಪಿಯ ಕೆಲ ಶಾಸಕರು ಬೊಟ್ಟು ಮಾಡಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ‘ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಆದ ವೈಫಲ್ಯವನ್ನು ಜಿಲ್ಲೆಯ ಜನರ ಮೇಲೆ ಹೇರಬಾರದು. ದಕ್ಷಿಣ ಕನ್ನಡ ಕೊಮು ಸೂಕ್ಷ್ಮ ಜಿಲ್ಲೆ, ಹಿಂದುತ್ವದ ಪ್ರಯೋಗಶಾಲೆ ಎಂದೆಲ್ಲ ಚಿತ್ರಿಸುವ ಪ್ರಯತ್ನಗಳು ನಿಲ್ಲಬೇಕು’ ಎಂದರು.
ಸಭೆಯಲ್ಲಿ ವ್ಯಕ್ತವಾದ ಸಲಹೆಗಳ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ಭರವಸೆ ನೀಡಿದರು.
‘ದ್ವೇಷ ಭಾಷಣ, ಗೋಹತ್ಯೆ ನಿಯಂತ್ರಣಕ್ಕೆ ಈಗಿರುವ ಕಾನೂನು ಬಳಸುತ್ತೇವೆ. ಸುಳ್ಳು ಸುದ್ದಿ ಹರಡುವಿಕೆ ತಡೆಯಲು ಮುಂದಿನ ಅಧಿವೇಶನದಲ್ಲೇ ಹೊಸ ಮಸೂದೆ ಮಂಡಿಸುತ್ತೇವೆ‘ ಎಂದು ತಿಳಿಸಿದರು.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಹರೀಶ್ ಪೂಂಜ, ರಾಜೇಶ್ ನಾಯ್ಕ್ ಉಳಿಪಾಡಿ, ಭಾಗಿರಥಿ ಮುರುಳ್ಯ, ಅಶೋಕ್ ಕುಮಾರ್ ರೈ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ವಿನಾಯಕ್ ನರವಾಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಭಾಗವಹಿಸಿದ್ದರು.
ಈಚೆಗೆ ಎರಡು ಮೂರು ಹತ್ಯೆಗಳಿಂದಾಗಿ ಇಡೀ ದೇಶದ ಗಮನ ದಕ್ಷಿಣ ಕನ್ನಡ ಜಿಲ್ಲೆಯತ್ತ ಹರಿಯಿತು. ನಮ್ಮ ಮಕ್ಕಳು ಭಯದಲ್ಲೇ ಬದುಕಬೇಕಾ?. ಇಂತಹ ಸ್ಥಿತಿ ಮುಂದುವರಿಯಬೇಕಾ?. ಇದನ್ನು ಸರಿಪಡಿಸಬೇಕಲ್ಲವೇ?ಜಿ.ಪರಮೇಶ್ವರ ಗೃಹ ಸಚಿವ
‘ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ಮಾದಕ ಪದಾರ್ಥ ಹಾವಳಿ ತಡೆ ಸಮಿತಿ ರಚಿಸಲು ಸೂಚನೆ ನೀಡಿದ್ದೇನೆ. ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ಪದಾರ್ಥ ಪತ್ತೆಯಾದರೆ ಆ ಸಂಸ್ಥೆಯವರನ್ನೂ ಹೊಣೆ ಮಾಡುತ್ತೇವೆ’ ಎಂದು ಜಿ.ಪರಮೇಶ್ವರ ತಿಳಿಸಿದರು. ‘ಡ್ರಗ್ಸ್ ದಂಧೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಯುದ್ಧ ಘೋಷಿಸಿದ್ದಾರೆ. ರಾಜ್ಯವನ್ನು ‘ಉಡ್ತಾ ಪಂಜಾಬ್’ ಆಗಲು ಬಿಡುವುದಿಲ್ಲ. ಮಂಗಳೂರಿನಲ್ಲಿ ಮಾತ್ರವಲ್ಲ ಇಡಿ ರಾಜ್ಯದಾದ್ಯಂತ ಡ್ರಗ್ಸ್ ಹಾವಳಿಯನ್ನು ನಿಯಂತ್ರಿಸುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.