
ಪ್ರಾತಿನಿಧಿಕ ಚಿತ್ರ
ಮಂಗಳೂರು: ಮುಂಗಾರು ಹಂಗಾಮಿನ ಭತ್ತದ ಕೊಯ್ಲು ಮುಕ್ತಾಯದ ಹಂತದಲ್ಲಿದ್ದು, ಹಿಂಗಾರು ಹಂಗಾಮಿನ ಭತ್ತ ನಾಟಿಗೆ ರೈತರು ಸಿದ್ಧತೆ ನಡೆಸಿದ್ದಾರೆ. ಕೃಷಿ ಇಲಾಖೆ ಈ ಬಾರಿ ಭತ್ತದ ಜೊತೆಗೆ 100 ಹೆಕ್ಟೇರ್ ಗದ್ದೆಯಲ್ಲಿ ಉದ್ದು ಬಿತ್ತನೆಗೆ ಸಿದ್ಧತೆ ನಡೆಸಿದೆ.
ದಶಕದ ಹಿಂದೆ ಜಿಲ್ಲೆಯಲ್ಲಿ ನಳನಳಿಸುತ್ತಿದ್ದ ಉದ್ದಿನ ಬಳ್ಳಿ ಮತ್ತೆ ರೈತರ ಗದ್ದೆಗಳಲ್ಲಿ ಕುಡಿಯೊಡೆಯಲಿದೆ. ಕೃಷಿ ಇಲಾಖೆಯ ರಾಷ್ಟ್ರೀಯ ಆಹಾರ ಭದ್ರತಾ ಪೌಷ್ಟಿಕ ಅಭಿಯಾನ ಯೋಜನೆಯಡಿ ಪ್ರಾಯೋಗಿಕವಾಗಿ 100 ಹೆಕ್ಟೇರ್ನಲ್ಲಿ ಉದ್ದು ಬೆಳೆಸಲು ಇಲಾಖೆ ಮುಂದಾಗಿದೆ. ಇದಕ್ಕಾಗಿ ಮಂಗಳೂರು, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲ್ಲೂಕುಗಳನ್ನು ಆಯ್ಕೆ ಮಾಡಿಕೊಂಡಿದೆ.
‘ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಭತ್ತವೇ ಪ್ರಮುಖ ಬೆಳೆ. ಸದ್ಯ ಬೇರೆ ಬೆಳೆಗಳು ಇಲ್ಲ. ಹಿಂಗಾರು ಹಂಗಾಮಿನಲ್ಲಿ ಸುಮಾರು 2 ಸಾವಿರ ಹೆಕ್ಟೇರ್ನಲ್ಲಿ ಭತ್ತ ಬಿತ್ತನೆಯಾಗುತ್ತದೆ. ಈ ಬಾರಿ ಭತ್ತದ ಜೊತೆಗೆ ದ್ವಿದಳ ಧಾನ್ಯ ಬೆಳೆಯುವಂತೆ ಪ್ರೋತ್ಸಾಹಿಸಿದ ಪರಿಣಾಮ ಅನೇಕ ರೈತರು ಉದ್ದಿನ ಬೀಜ ಕೊಂಡೊಯ್ಯುತ್ತಿದ್ದಾರೆ’ ಎಂದು ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ತಿಳಿಸಿದರು.
‘ಮುಂಗಾರು ಹಂಗಾಮಿನ ಭತ್ತ ಕಟಾವಿನ ನಂತರ ಗದ್ದೆಯಲ್ಲಿ ತೇವಾಂಶ ಇರುತ್ತದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವ ಜೊತೆಗೆ ಮಣ್ಣಿನ ಫಲವತ್ತತೆ ಹೆಚ್ಚಿಸುವ ಉದ್ದೇಶದಿಂದ ದ್ವಿದಳ ಧಾನ್ಯ ಬೆಳೆ ಪ್ರಯೋಗಕ್ಕೆ ಮುಂದಾಗಿದ್ದೇವೆ. ದ್ವಿದಳ ಧಾನ್ಯ ಬೆಳೆದರೆ, ಬಳ್ಳಿ ಒಣಗಿದ ಮೇಲೆ ಎಲೆಗಳು ಗೊಬ್ಬರವಾಗಿ ಮಣ್ಣಿನ ಗುಣಮಟ್ಟ ಉತ್ತಮವಾಗುತ್ತದೆ. ಇದೇ ರೀತಿಯ ಹವಾಗುಣ ಇರುವ ನೆರೆಯ ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ದ್ವಿದಳ ಧಾನ್ಯ ಬೆಳೆಯಲಾಗುತ್ತಿದೆ. ಹೀಗಾಗಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈ ಪ್ರಯೋಗ ಯಶಸ್ವಿಯಾಗಬಹುದೆಂದು ನಿರೀಕ್ಷಿಸಲಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದರು.
‘ಮೂರು ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜದ ಕಿಟ್ಗಳು ಲಭ್ಯ ಇವೆ. ಬೀಜದ ಉದ್ದಿನ 100 ಮಿನಿಕಿಟ್ಗಳನ್ನು ಶೇ 100ರ ಸಹಾಯಧನದಲ್ಲಿ ರೈತರಿಗೆ ನೀಡಲಾಗುತ್ತಿದೆ. ಪ್ರತಿ ಕಿಟ್ನಲ್ಲಿ 4 ಕೆ.ಜಿ.ಯ ಬೀಜದ ಉದ್ದಿನ ಜೊತೆಗೆ ಬೆಳೆಯ ಪ್ಯಾಕೇಜ್ ಆಫ್ ಪ್ರಾಕ್ಟೀಸ್ನ (ಪಿಒಪಿ) ಕರಪತ್ರ ಇರುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.