ಮಂಗಳೂರು ದಸರಾ ಭಾಗವಾಗಿ ನಡೆದ ದಸರಾ ಮ್ಯಾರಥಾನ್ನಲ್ಲಿ ಜನರು ಉತ್ಸಾಹದಿಂದ ಭಾಗವಹಿಸಿದರು.
ಮಂಗಳೂರು: ಧೋ ಎಂದು ಸುರಿಯುತ್ತಿದ್ದ ಮಯು ಸಹ ಸೇರಿದ್ದವರ ಅಮಿತ ಉತ್ಸಾಹವನ್ನು ತಗ್ಗಿಸಲು ವಿಫಲವಾಯಿತು. ಬೆಳಗು ಹರಿಯುವ ಹೊತ್ತಿಗೆ ಅಲ್ಲಿ ಸೇರಿದ್ದ ಸಾವಿರಾರು ಜನರಿಗೆ ಗುರಿಯತ್ತ ಧಾವಿಸುವುದೇ ಸಂಕಲ್ಪವಾಗಿತ್ತು. ಇಳಿವ ಬೆವರಿನೊಂದಿಗೆ ಸುರಿವ ಮಳೆ ಆಯಾಸ ನೀಗಿಸಿ, ಮೈಮನಕ್ಕೆ ತಂಪೆರೆಯಿತು. ಗಮ್ಯ ಸ್ಥಾನ ತಲುಪಿ ಸಂತುಷ್ಟರಾದರು ಓಟಗಾರರು...
ಮಂಗಳೂರು ದಸರಾ ಭಾಗವಾಗಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಭಾನುವಾರ ನಸುಕಿನಲ್ಲಿ ನಡೆದ ‘ದಸರಾ ಮ್ಯಾರಥಾನ್’ನಲ್ಲಿ ಕಂಡ ದೃಶ್ಯಗಳಿವು. ಜೂಯಿಸ್ ಫಿಟ್ನೆಸ್ ಕ್ಲಬ್, ಯೂನಿಯನ್ ಬ್ಯಾಂಕ್ ಸಹಕಾರದಲ್ಲಿ ನಡೆದ ಮ್ಯಾರಥಾನ್ನಲ್ಲಿ ರಾಜ್ಯ, ಹೊರರಾಜ್ಯಗಳ ಕ್ರೀಡಾಪಟುಗಳು, ಪುಟ್ಟ ಮಕ್ಕಳು, ಹಿರಿಯರು ಸೇರಿ 2 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ 21ಕೆ ರನ್, 10ಕೆ ರನ್, 5ಕೆ ರನ್, ಮಹಿಳೆಯರಿಗೆ 2ಕೆ ಸಾರಿ ರನ್ ಸ್ಪರ್ಧೆ ನಡೆಯಿತು. 21ಕೆ ರನ್ ಪ್ರಥಮ ಬಹುಮಾನ ₹25 ಸಾವಿರ, ದ್ವಿತೀಯ ₹15 ಸಾವಿರ, ತೃತೀಯ ₹10 ಸಾವಿರ, 10ಕೆ ರನ್ ಪ್ರಥಮ ₹15 ಸಾವಿರ, ದ್ವಿತೀಯ ₹10 ಸಾವಿರ, ತೃತೀಯ ₹5 ಸಾವಿರ ಬಹುಮಾನ ನೀಡಲಾಯಿತು.
ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮ್ಯಾರಥಾನ್ಗೆ ಚಾಲನೆ ನೀಡಿದರು. ಯೂನಿಯನ್ ಬ್ಯಾಂಕ್ ಮಂಗಳೂರು ಪ್ರಾದೇಶಿಕ ಮುಖ್ಯಸ್ಥ ನರಸಿಂಹ ಕುಮಾರ್, ವಲಯ ಮುಖ್ಯಸ್ಥೆ ತೇಜಸ್ವಿನಿ ವಿ.ಸಿ., ಕುದ್ರೋಳಿ ಕ್ಷೇತ್ರಾಭಿವೃದ್ಧಿ ಸಮಿತಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಕಿಶೋರ್ ದಂಡೆಕೇರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಅಭಿವೃದ್ಧಿ ಸಮಿತಿ ಸದಸ್ಯ ಲೀಲಾಕ್ಷ ಕರ್ಕೇರಾ, ಜೂಯಿಸ್ ಫಿಟ್ನೆಸ್ ಕ್ಲಬ್ನ ರಾಜೇಶ್ ಪಾಟಾಳಿ ಭಾಗವಹಿಸಿದ್ದರು.
ಹೃದಯ ಗೆದ್ದ ಕಿನ್ನಿಪಿಲಿ ಮಕ್ಕಳಿಗಾಗಿ ಆಯೋಜಿಸಿದ್ದ ಕಿನ್ನಿಪಿಲಿ ಸ್ಪರ್ಧೆಯಲ್ಲಿ ಪುಟಾಣಿಗಳು ಹುಲಿವೇಷ ಧರಿಸಿ ಪ್ರೇಕ್ಷಕರ ಮನಸೂರೆಗೊಂಡರು. ಅಂಬೆಗಾಲಿಕ್ಕುವ ಬಾಲಕನೊಬ್ಬ ತಡವಿ ಬೀಳುತ್ತ ಏಳುತ್ತ ಹುಲಿ ಹೆಜ್ಜೆ ಹಾಕಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಪಾಲಕರು ಮಕ್ಕಳಿಗೆ ಹುಲಿವೇಷ ಕಟ್ಟಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.