
ವಿಟ್ಲ: ಸಮಾಜದ ಹಿತ ಕಾಯುವವರೇ ನಿಜವಾದ ಗುರು. ಸರಿಯಾದ ಬದುಕು ನಡೆಸಲು ಸರಿಯಾದ ಗುರು ಹಾಗೂ ಸಮಾಜದ ಅಗತ್ಯವಿದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ದತ್ತ ಜಯಂತಿ ಮಹೋತ್ಸವ, ದತ್ತ ಮಹಾಯಾಗ ಸಪ್ತಾಹ ಸಮಾಪನ ಹಾಗೂ ಗುರುದೇವ ದತ್ತ ಲಕ್ಷ ದೀಪಾವಳಿ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಅಹಂಕಾರವು ಸಮಾಜಕ್ಕೆ ವಿಷಯವಾಗಿದ್ದು, ವಿನಯ ತುಂಬಿದಾಗ ಅಮೃತವಾಗುತ್ತದೆ. ಬದುಕಿನಲ್ಲಿ ಇತಿ–ಮಿತಿಗಳನ್ನು ಇಟ್ಟುಕೊಂಡು ಮುನ್ನಡೆಯಬೇಕು ಎಂದರು.
ಭಗವಂತನ ಅವತಾರದಲ್ಲಿ ತ್ಯಾಗ ಮನೋಭಾವ ಅಡಗಿದೆ. ದತ್ತಾವತಾರ ಜ್ಞಾನದ ಅವತಾರವಾಗಿದ್ದು, ಜಪ ಅಧ್ಯಾತ್ಮದ ಜೀವಾಳವಾಗಿದೆ. ಅಂಧಕಾರ ದೂರವಾಗಲು ಜ್ಞಾನದ ಬೆಳಕಿನ ಅಗತ್ಯವಿದೆ. ಸಾತ್ವಿಕತೆಯನ್ನು ತೊಡಗಿಸಿಕೊಳ್ಳುವ ಕಾರ್ಯವಾಗಬೇಕು ಎಂದರು.
ಸಾಧ್ವಿ ಮಾತಾನಂದಮಯಿ ಆಶೀರ್ವಚನ ನೀಡಿ, ಗುರುಗಳ ಮಾರ್ಗದರ್ಶನ ಚೈತನ್ಯ ಶಕ್ತಿಯನ್ನು ಹೆಚ್ಚಿಸುತ್ತದೆ. ಗುರುಗಳ ಸಂಕಲ್ಪದಂತೆ ಕೋಟಿ ನಾಮ ಜಪ ಯಶಸ್ವಿಯಾಗಿದೆ. ಗುರು ಸಾನ್ನಿಧ್ಯದಲ್ಲಿ ಸ್ಮರಣೆ ಮಾಡಿದಾಗ ದೈವಿಕ ಅನುಗ್ರಹದ ಅನುಭವ ಆಗುತ್ತದೆ. ಜಪಯಜ್ಞ, ಜ್ಞಾನಯಜ್ಞ, ಧ್ಯಾನಯಜ್ಞದ ಮೂಲಕ ಯಜ್ಞಗಳ ಸಂಗಮ ನಡೆದಿದೆ ಎಂದು ಹೇಳಿದರು.
ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕ್ಷೇತ್ರದ ಧಾನಿಗಳನ್ನು ಗೌರವಿಸಲಾಯಿತು.
ಉದ್ಯಮಿ ವಾಮಯ್ಯ ಬಿ.ಶೆಟ್ಟಿ, ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ.ಸುರೇಶ್ ರೈ, ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಮುಂಬೈ ಗುರುದೇವಾ ಸೇವಾ ಬಳಗದ ಅಧ್ಯಕ್ಷ ದಾಮೋದರ ಎಸ್.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮುಂಬೈನ ಅಧ್ಯಕ್ಷೆ ಶ್ವೇತಾ ಸಿ.ರೈ, ಪುಣೆ ಅಧ್ಯಕ್ಷೆ ಜಯಲಕ್ಷ್ಮೀ ಪಿ.ಶೆಟ್ಟಿ, ಮುಂಬೈ ಯುವ ಸೇವಾ ಬಳಗದ ಅದೀಪ್ ಕೆ.ಶೆಟ್ಟಿ, ಅಜಿತ್ ಕುಮಾರ್ ಪಂದಳಂ, ಹನುಮಂತಪ್ಪ ದಾವಣಗೆರೆ ಭಾಗವಹಿಸಿದ್ದರು.
ಯಶವಂತ ವಿಟ್ಲ ಸ್ವಾಗತಿಸಿದರು. ಸಂತೋಷ್ ಭಂಡಾರಿ ವಂದಿಸಿದರು. ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಕ್ಷೇತ್ರದ ಮಹಾದ್ವಾರದಿಂದ ದತ್ತಮಾಲಾಧಾರಿಗಳ ನಾಮಸಂಕೀರ್ತನಾ ಶೋಭಾಯಾತ್ರೆ, ದತ್ತ ಕೋಟಿನಾಮಜಪ ನಡೆಯಿತು. ವೇದ, ಶ್ರೀಗುರುಚರಿತ್ರೆ ಪಾರಾಯಣ ಸಮಾಪ್ತಿ, ಶ್ರೀದತ್ತ ಮಹಾಯಾಗದ ಪೂರ್ಣಾಹುತಿ, ಕಲ್ಪೋಕ್ತ ಪೂಜೆ, ಮಹಾಪೂಜೆ, ಶ್ರೀಗಳಿಂದ ಸಂಪ್ರದಾಯದಂತೆ ಮಧುಕರೀ, ಮಂತ್ರಾಕ್ಷತೆ ನಡೆಯಿತು. ಸಂಜೆ ಶ್ರೀಗುರುದೇವದತ್ತ ಲಕ್ಷ ದೀಪಾವಳಿ, ರಂಗಪೂಜೆ, ಬೆಳ್ಳಿರಥೋತ್ಸವ, ಉಯ್ಯಾಲೆ ಸೇವೆ ಸಂಪನ್ನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.