ADVERTISEMENT

ಮಂಗಳೂರು | ಜಿಲ್ಲಾ ಆಡಳಿತದಿಂದ ಅರಸು ಜಯಂತಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 7:48 IST
Last Updated 21 ಆಗಸ್ಟ್ 2025, 7:48 IST
<div class="paragraphs"><p>ಮಂಗಳೂರು ಜಿಲ್ಲಾ ಆಡಳಿತದಿಂದ ದೇವರಾಜ ಅರಸು ಜಯಂತಿ&nbsp; ಆಚರಿಸಲಾಯಿತು</p></div>

ಮಂಗಳೂರು ಜಿಲ್ಲಾ ಆಡಳಿತದಿಂದ ದೇವರಾಜ ಅರಸು ಜಯಂತಿ  ಆಚರಿಸಲಾಯಿತು

   

ಮಂಗಳೂರು: ಉಳುವವನೇ ಹೊಲದ ಒಡೆಯ ಎಂಬ ಕಾನೂನು ದೇಶದಲ್ಲಿ ಪರಿಣಾಮಕಾರಿಯಾಗಿ ಜಾರಿಯಾದ ರಾಜ್ಯಗಳಲ್ಲಿ ಕರ್ನಾಟಕ ಪ್ರಮುಖವಾಗಿದೆ. ತಮ್ಮ ರಾಜಕೀಯ ಭವಿಷ್ಯವನ್ನು ಪಣಕ್ಕಿಟ್ಟು ದೇವರಾಜ ಅರಸು ಅವರು ಇದನ್ನು ಜಾರಿಗೆ ತಂದರು ಎಂದು ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಬುಧವಾರ ಇಲ್ಲಿಯ ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ನಡೆದ  ಮಾಜಿ ಮುಖ್ಯಮಂತ್ರಿ  ಡಿ.ದೇವರಾಜ ಅರಸು ಅವರ  110ನೇ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ADVERTISEMENT

ಭೂ ಸುಧಾರಣೆ ಕಾನೂನಿನಿಂದಾಗಿ ಹಲವಾರು ಮಂದಿ ಗೇಣಿದಾರರು ಹಾಗೂ ಭೂ ರಹಿತರಿಗೆ ಭೂಮಿಯ ಮಾಲೀಕತ್ವ ಲಭ್ಯವಾಯಿತು. ಈಗ ಈ ಭೂಮಿಯ ಪ್ರಯೋಜನ ಪಡೆಯುತ್ತಿರುವ ಇಂದಿನ ಪೀಳಿಗೆಯವರಿಗೆ ತಮಗೆ ಈ ಭೂಮಿ ಹೇಗೆ ದೊರಕಿದ್ದು ಎಂಬುದರ ಮಾಹಿತಿ ಇಲ್ಲದಿರುವುದು ವಿಷಾದಕರ. ತಮ್ಮ ಕುಟುಂಬದ ಹಿರಿಯರಿಂದ ಮಕ್ಕಳು ಇದರ ಮಾಹಿತಿ ಪಡೆಯಬೇಕು ಎಂದರು.

ಉಪನ್ಯಾಸ ನೀಡಿದ ಪುತ್ತೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಜಾಕ್ ಮಾತನಾಡಿ, ಅರಸು ಅವರ ಸಂಪುಟದಲ್ಲಿ ಅಂದು  ಸಚಿವರಾಗಿದ್ದ ಸುಬ್ಬಯ್ಯ ಶೆಟ್ಟಿ ಅವರು ಅರಸು ಅವರೊಂದಿಗೆ ಗಟ್ಟಿಯಾಗಿ ನಿಂತಿದ್ದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಸುಧಾರಣೆ ಕಾನೂನು ಪರಿಣಾಮಕಾರಿಯಾಗಿ ಜಾರಿಗೆ  ಬರುವಂತಾಯಿತು ಎಂದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮದ  ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ  ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ  ಕಾರಭಾರಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿಂದಿಯಾ ಎನ್  ನಾಯಕ್  ಸ್ವಾಗತಿಸಿದರು.

ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ  ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿಗಳನ್ನು  ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.