ಧರ್ಮಸ್ಥಳ ಪ್ರಕರಣದ ಸಾಕ್ಷಿ ದೂರುದಾರನೊಂದಿಗೆ ಅಧಿಕಾರಿಗಳು
ಮಂಗಳೂರು: ಧರ್ಮಸ್ಥಳ ಬೆಳವಣಿಗೆಗೆ ಸಂಬಂಂಧಿಸಿ ಸಾಕ್ಷಿ ದೂರುದಾರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಳ್ತಂಗಡಿಯ ಜೆಎಂಎಫ್ಸಿ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ಪ್ರಕರಣದ ಸಾಕ್ಷಿ ದೂರುದಾರ, ‘ತಾನು ಹೂತುಹಾಕಿದ್ದ ಮೃತದೇಹವೊಂದರ ಬುರುಡೆ’ ಎಂದು ಹೇಳಿಕೊಂಡು, ಪೊಲೀಸರಿಗೆ ಮನುಷ್ಯನ ತಲೆಬುರುಡೆ ಪ್ಪಿಸಿದ್ದ. ಎಸ್ಐಟಿ ನಡೆಸಿದ್ದ ವಿಚಾರಣೆ ವೇಳೆ, ‘ಆ ತಲೆಬುರುಡೆ ನಾನು ಹೂತು ಹಾಕಿದ್ದ ಮೃತದೇಹದ್ದಲ್ಲ’ ಎಂದು ಆತ ಒಪ್ಪಿಕೊಂಡಿದ್ದ. ಆತನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿ, ಆ.23ರಂದು ಬೆಳ್ತಂಗಡಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 221ರ (ಪೊಲೀಸರಿಗೆ ಕಾನೂನುಬದ್ಧವಾಗಿ ಮಾಹಿತಿ ನೀಡಬೇಕಾದ ವ್ಯಕ್ತಿ ಅದರಿಂದ ನುಣುಚಿಕೊಳ್ಳುವುದು) ಜೊತೆಗೆ ಹೆಚ್ಚುವರಿಯಾಗಿ ಸೆಕ್ಷನ್ 227 (ಸುಳ್ಳು ಸಾಕ್ಷ್ಯ ಒದಗಿಸಿರುವುದು), ಸೆಕ್ಷನ್ 228 (ಸುಳ್ಳು ಸಾಕ್ಷ್ಯ ಸೃಷ್ಟಿ), ಸೆಕ್ಷನ್ 229 (ಸುಳ್ಳು ಸಾಕ್ಷ್ಯ ಸೃಷ್ಟಿಗೆ ಶಿಕ್ಷೆ), ಸೆಕ್ಷನ್ 230 (ಮರಣದಂಡನೆಗೆ ಅರ್ಹವಾದ ಅಪರಾಧಕ್ಕೆ ಸುಳ್ಳು ಸಾಕ್ಷ್ಯ ಸೃಷ್ಟಿ), ಸೆಕ್ಷನ್ 231 (ಜೀವಾವಧಿ ಶಿಕ್ಷೆ ಕೊಡುವಂತಹ ಅಪರಾಧಕ್ಕೆ ಸಂಬಂಧಿಸಿ ಸುಳ್ಳು ಸಾಕ್ಷ್ಯ ಸೃಷ್ಟಿ), 236 (ಸುಳ್ಳು ಘೋಷಣೆ), ಸೆಕ್ಷನ್ 248 (ಸುಳ್ಳು ಆರೋಪ), ಸೆಕ್ಷನ್ 336 (ನಕಲಿ ದಾಖಲೆ ಸೃಷ್ಟಿ) ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿದ್ದರು.
‘ಇದೊಂದು ಗಂಭೀರ ಪ್ರಕರಣ. ಎಸ್ಐಟಿ ತನಿಖೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಜಾಮೀನು ಮಂಜೂರು ಮಾಡುವುದು ಸೂಕ್ತವಲ್ಲ’ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಟಿ.ಎಚ್. ವಿಜಯೇಂದ್ರ ಆದೇಶದಲ್ಲಿ ತಿಳಿಸಿದ್ದಾರೆ.
ಸೆ. 6ರವರೆಗೆ ಎಸ್ಐಟಿ ವಶದಲ್ಲಿದ್ದ ಸಾಕ್ಷಿ ದೂರುದಾರ ಪ್ರಸ್ತುತ ಶಿವಮೊಗ್ಗದ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆತನ ಪರ ವಾದಿಸಲು ವಕೀಲರು ಮುಂದೆ ಬಂದಿರಲಿಲ್ಲ. ವಕೀಲರ ನೆರವು ಪಡೆಯಲು ನ್ಯಾಯಾಲಯವೇ ವ್ಯವಸ್ಥೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.