ಮಂಗಳೂರು: ಧರ್ಮಸ್ಥಳ ಬೆಳವಣಿಗೆ ಕುರಿತು ಇದುವರೆಗೆ ನಡೆದ ಶೋಧ ಕಾರ್ಯದಲ್ಲಿ ಪತ್ತೆಯಾದ ಅಂಶಗಳ ಬಗೆಗಿನ ತನಿಖೆಯನ್ನು ವಿಶೇಷ ತನಿಖಾ ತಂಡ ಚುರುಕುಗೊಳಿಸಿದೆ.
ಸಾಕ್ಷಿ ದೂರುದಾರನ ಬೆಳ್ತಂಗಡಿಯ ಕಚೇರಿಗೆ ಶನಿವಾರ ಕರೆಸಿಕೊಂಡ ಎಸ್ಐಟಿ ಅಧಿಕಾರಿಗಳು, ಆತ ದೂರಿನಲ್ಲಿ ಮಾಡಿರುವ ಆರೋಪಗಳು ಹಾಗೂ ಆತ ತೋರಿಸಿದ ಜಾಗಗಳ ಶೋಧಕಾರ್ಯಕ್ಕೆ ಸಂಬಂಧಿಸಿ ವಿಚಾರಣೆಗೆ ಒಳಪಡಿಸಿದರು.
ಶೋಧ ಕಾರ್ಯದ ವೇಳೆ 6 ಹಾಗೂ 11ನೇ ಜಾಗಕ್ಕಿಂತ 100 ಮೀ ದೂರದಲ್ಲಿ ಸಿಕ್ಕಿರುವ ಮೃತದೇಹಗಳ ಅವಶೇಷಗಳನ್ನು ಬೆಂಗಳೂರಿನ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಹಾಗೂ ಕಸ್ತೂರಬಾ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
‘ಈವರೆಗಿನ ಶೋಧ ಕಾರ್ಯಕ್ಕೆ ಸಂಬಂಧಿಸಿದ ತನಿಖೆಗೆ ಸಾಕಷ್ಟು ಸಮಯಬೇಕು. ಅಗತ್ಯ ನೋಡಿಕೊಂಡು ಶೋಧ ಕಾರ್ಯ ಮುಂದುವರಿಸುತ್ತೇವೆ’ ಎಂದು ಮೂಲಗಳು ತಿಳಿಸಿವೆ.
ಸದ್ಯಕ್ಕೆ ಎಸ್ಐಟಿ, ಹೊಸತಾಗಿ ಬಂದ ದೂರುಗಳಿಗೆ ಸಂಬಂಧಿಸಿದ ತನಿಖೆ ಆರಂಭಿಸಿಲ್ಲ. ಸಾಕ್ಷಿ ದೂರುದಾರ ಮಾಡಿರುವ ಆರೋಪಗಳ ತನಿಖೆ ಒಂದು ಹಂತಕ್ಕೆ ಬಂದ ಬಳಿಕವಷ್ಟೇ ಉಳಿದ ದೂರುಗಳ ತನಿಖೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಾಕ್ಷಿ ದೂರುದಾರ ತೋರಿಸಿರುವ 18 ಜಾಗಗಳ ಪೈಕಿ ಈವರೆಗೆ 17 ಕಡೆ ನೆಲ ಅಗೆದಿದ್ದು, ಎರಡು ಕಡೆ ಮೃತದೇಹಗಳ ಅವಶೇಷಗಳು ಸಿಕ್ಕಿವೆ. ಶನಿವಾರ ಹೊಸ ಜಾಗ ತೋರಿಸಿಲ್ಲ.
ಮೃತದೇಹ ವಿಲೇವಾರಿಯಲ್ಲಿ ಲೋಪ: ‘13ರಿಂದ 15 ವರ್ಷದೊಳಗಿನ ಬಾಲಕಿಯ ಮೃತದೇಹ ಹೂತು ಹಾಕಿದ ಬಗ್ಗೆ ತನಿಖೆ ನಡೆಸುವಂತೆ ಎಸ್ಐಟಿಗೆ ಆ. 4ರಂದು ದೂರು ನೀಡಿದ್ದೆ. ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇನೆ. ಕೃತ್ಯ ನಡೆದಾಗ ಜೊತೆಗಿದ್ದವರ ಬಗ್ಗೆ ತಿಳಿಸಿದ್ದೆ. ಎಸ್ಐಟಿಯವರು ಅವರ ಮನೆಗೆ ಹೋಗಿ ಮಾಹಿತಿ ಪಡೆದಿದ್ದು, ಗುರುವಾರ ಸ್ಥಳ ಮಹಜರು ನಡೆಸಿದ್ದಾರೆ. ಇನ್ನಷ್ಟೇ ನಾನು ತೋರಿಸಿದ್ದ ಜಾಗ ಅಗೆಯಬೇಕಿದೆ’ ಎಂದು ಕಡಬ ತಾಲ್ಲೂರು ಇಚ್ಲಂಪಾಡಿಯ ಜಯಂತ್ ಟಿ. ಸುದ್ದಿಗಾರರಿಗೆ ತಿಳಿಸಿದರು.
ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ಹೇಳಿಕೆ ದಾಖಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಾ, ‘2010ರ ಏ. 6 ರಂದು ಧರ್ಮಸ್ಥಳದ ವಸತಿಗೃಹವೊಂದರಲ್ಲಿ 35ರಿಂದ 40 ವರ್ಷದ ಮಹಿಳೆ ಕೊಲೆ ಕುರಿತು ಮಾಹಿತಿ ಹಕ್ಕಿನಡಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ದಿನವೇ, ದಫನ ಮಾಡಿದ್ದಾರೆ. ಮೃತ ವ್ಯಕ್ತಿ ಯಾರು ಎಂದು ತಿಳಿಯುವ ಯತ್ನ ನಡೆದಿಲ್ಲ ಪ್ರಕರಣ ಮುಚ್ಚಿ ಹಾಕಿದ್ದು ಯಾರು’ ಎಂದು ಪ್ರಶ್ನಿಸಿದರು.
‘ಮಾಹಿತಿ ಹಕ್ಕಿನಡಿ 1995ರಿಂದ 2024ರವರೆಗೆ ಧರ್ಮಸ್ಥಳದಲ್ಲಿ ಸಂಭವಿಸಿದ್ದ 160 ಅಸಹಜ ಸಾವುಗಳ ಮಾಹಿತಿ ಪಡೆದಿದ್ದೇನೆ. ಕೆಲ ಮೃತದೇಹಗಳು ಬಸ್ನಿಲ್ದಾಣದ ಬಳಿ, ದ್ವಾರದ ಬಳಿ, ಬೆಟ್ಟಕ್ಕೆ ಹೋಗುವ ದಾರಿಯ ಬಳಿ ಸಿಕ್ಕಿವೆ. ಆತ್ಮಹತ್ಯೆ ಮಾಡಿಕೊಂಡವರ ದೇಹಗಳು ಇವೆ. ಇವನ್ನು ಅದೇ ದಿನ ದಫನ ಮಾಡಿದ್ದು ಸರಿಯೇ’ ಎಂದು ಪ್ರಶ್ನಿಸಿದರು.
ಸಾಕ್ಷಿದಾರರಿಗೆ ಬೆದರಿಕೆ: ‘ಸಾಕ್ಷಿದಾರರೊಬ್ಬರಿಗೆ ಧರ್ಮಸ್ಥಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಬೆದರಿಕೆ ಒಡ್ಡಿದ್ದಾರೆ. ಬೆದರಿಕೆ ಒಡ್ಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಠಾಣೆಗೆ ದೂರು ನೀಡಿದ್ದೇವೆ’ ಎಂದು ಜಯಂತ ಟಿ. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.