ಬೆಳ್ತಂಗಡಿ: ‘ಮನುಷ್ಯತ್ವ ಇರುವವರು ಯಾರೂ ಯಾವ ಕೊಲೆಗಳನ್ನೂ ಸಮರ್ಥಿಸಲು ಸಾಧ್ಯವಿಲ್ಲ. ಅಂತೆಯೇ ಕರಾವಳಿಯಲ್ಲಿ ನಡೆದ ಮಸೂದ್ ಮತ್ತು ಫಾಝಿಲ್ ಕೊಲೆಗೆ ಸಮಾನ ಪರಿಹಾರ ಮತ್ತು ನ್ಯಾಯ ದಾನದಲ್ಲಿ ಸರ್ಕಾರ ತಾರತಮ್ಯವನ್ನೂ ನಾವು ಒಪ್ಪುವುದಿಲ್ಲ’ ಎಂದು ಬೆಳ್ತಂಗಡಿ ದಾರುಸ್ಸಲಾಂ ದಅವಾ ಕಾಲೇಜು ಮುಖ್ಯ ಗುರು ಮೌಲಾನಾ ಇಸ್ಹಾಕ್ ಕೌಸರಿ ಹೇಳಿದರು.
ಸುಳ್ಯದ ಮಸೂದ್ ಮತ್ತು ಸುರ ತ್ಕಲ್ನ ಫಾಝಿಲ್ ಅವರ ಹತ್ಯೆ ಪ್ರಕರಣ ಗಳ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಮತ್ತು ಸರ್ಕಾರ ಸಮಾನ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮುಸ್ಲಿಂ ಒಕ್ಕೂಟದ ವತಿಯಿಂದ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಆಡಳಿತದ ಪದವಿಗೆ ಘನತೆ ಮತ್ತು ಪಾವಿತ್ರ್ಯ ಇದೆ. ಅಲ್ಲಿ ಕುಳಿತು ಕೊಳ್ಳಬೇಕಾದವರು ಆ ಪಾವಿತ್ರ್ಯ ವನ್ನು ಕಾಪಾಡಲು ಅನರ್ಹರಾದರೆ ಸ್ಥಾನದಿಂದ ಇಳಿಯಬೇಕು. ಇಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ ಎಂದಾದರೆ ಅದು ಆಡಳಿತದಲ್ಲಿರುವವರ ದೌರ್ಬಲ್ಯಕ್ಕೆ ಸಾಕ್ಷಿ’ ಎಂದು ಕಿಡಿಕಾಡಿದರು.
ಪೆರಾಲ್ದರಕಟ್ಟೆ ಮಸ್ಜಿದ್ ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ ಮಾತನಾಡಿ, ‘ತ್ರಿವಳಿ ತಲಾಕ್, ಶರೀಅತ್ ಕಾನೂನು, ಆಝಾನ್, ವ್ಯಾಪಾರ ಬಹಿಷ್ಕಾರ, ಜಡ್ಕಾ ಕಟ್ ಹೀಗೆ ಮುಸ್ಲಿಮರ ವಿರುದ್ಧ ನಿರಂತರ ದಮನಕಾರಿ ನಿಲುವು ತಾಳಿರುವ ಆಡಳಿತಗಾರರು ಉನ್ನತ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸುತ್ತಿದೆ’ ಎಂದರು.
ತಾಲ್ಲೂಕು ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಎ. ನಝೀರ್ ಬೆಳ್ತಂಗಡಿ ಅಧ್ಯಕ್ಷತೆ ವಹಿಸಿದ್ದರು.ಸೈಯ್ಯಿದ್ ಅಕ್ರಂ ಅಲೀ ತಂಙಳ್, ಐ.ಕೆ. ಮೂಸಾದಾರಿಮಿ ಕಕ್ಕಿಂಜೆ ಮಾತನಾಡಿದರು.
ಇಸ್ಲಾಂ ಧರ್ಮದ ಬಗ್ಗೆ ಹಾಗೂ ಮದರಸಗಳ ಬಗ್ಗೆ ಅಲ್ಲಲ್ಲಿ ಅಪ ಪ್ರಚಾರಗಳನ್ನು ಮಾಡುತ್ತಾ, ಕಪೋಲ ಕಲ್ಪಿತ ಹೇಳಿಕೆಗಳನ್ನು ನೀಡುವುದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬೆಳ್ತಂಗಡಿ ಮುಸ್ಲಿಂ ಒಕ್ಕೂಟದ ಸದಸ್ಯ ಅಬ್ದುರ್ ರಝಾಕ್ ಕನ್ನಡಿಕಟ್ಟೆ, ಗುರುವಾಯನಕೆರೆ ದರ್ಗಾ ಸಮಿತಿ ಕಾರ್ಯದರ್ಶಿ ಉಮರ್ ಜಿ.ಕೆ, ಬೆಳ್ತಂಗಡಿ ಗ್ಲೋಬಲ್ ಫೌಂಡೇಷನ್ ಅಧ್ಯಕ್ಷ ಇಸ್ಮಾಯಿಲ್ ಸಂಜಯನಗರ, ಜನಪರ ಚಳವಳಿಗಾರ ದಮ್ಮಾನಂದ, ದಲಿತ ಹಕ್ಕುಗಳ ಹೋರಾಟ ಸಮಿತಿ ಸಂಚಾಲಕ ಶೇಖರ್ ಲಾಯಿಲ, ಬೆಳ್ತಂಗಡಿ ಮಸ್ಜಿದ್ ಖತೀಬ್ ರಿಯಾಝ್ ಫೈಝಿ ಇದ್ದರು.
ವಕೀಲ ನವಾಝ್ ಶರೀಫ್ ಕಕ್ಕಿಂಜೆ ಸ್ವಾಗತಿಸಿದರು. ಬೆಳ್ತಂಗಡಿ ಮುಸ್ಲಿಂ ಒಕ್ಕೂಟ ಸದಸ್ಯ ತಲ್ಹತ್ ಎಂ.ಜಿ., ಮುಸ್ಲಿಂ ಒಕ್ಕೂಟ ಸದಸ್ಯ ಅಬ್ದುಲ್ ಖಾದರ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.