ಮಂಗಳೂರು: ಜಿಲ್ಲೆಯಲ್ಲಿ ನಡೆಯುವ ಹತ್ಯೆಗಳ ಹಿಂದಿರುವ ದುಷ್ಟಶಕ್ತಿ ಯಾರೆಂದು ಪತ್ತೆ ಹಚ್ಚಿ, ಕಠಿಣ ಶಿಕ್ಷೆ ನೀಡಿದಾಗ ಮಾತ್ರ ಇಂತಹ ಘಟನೆಗಳು ಮರುಕಳಿಸುವುದು ನಿಲ್ಲುತ್ತದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಅಭಿಪ್ರಾಯಪಟ್ಟರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆದಿರುವ ಘಟನೆಗಳಲ್ಲಿ ಹತ್ಯೆಯಾದ ಯುವಕರು ಮತ್ತು ಜೈಲಿಗೆ ಹೋದ ಯುವಕರು, ಅವರು ಹಿಂದೂ ಸಮುದಾಯದವರೇ ಇರಲಿ ಅಥವಾ ಮುಸ್ಲಿಂ ಸಮುದಾಯದವರೇ ಇರಲಿ ಎಲ್ಲರೂ ದುರ್ಬಲ ವರ್ಗದವರೇ ಆಗಿದ್ದಾರೆ ಎಂದರು.
ಕೆಲವು ರಾಜಕೀಯ ಮುಖಂಡರ ಕೋಮುದ್ವೇಷದ ಪ್ರಚೋದನಕಾರಿ ಭಾಷಣಗಳು ಜಿಲ್ಲೆಯಲ್ಲಿಯೂ ಅಶಾಂತಿಯ ವಾತವರಣ ವನ್ನು ಸೃಷ್ಟಿ ಸಿವೆ ಮತ್ತು ಅಮಾಯಕರ ಕೊಲೆಗೂ ಕಾರಣ ವಾಗಿವೆ. ಪ್ರಚೋದನಕಾರಿ ಭಾಷಣ ಮಾಡುವವರು ಗಲಭೆಗಳ ಹಿಂದೆ ಇರುತ್ತಾರೆ. ಆದರೆ ಇಂತಹ ಪ್ರಕರಣ ನಡೆದಾಗ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು, ಕೆಲವು ಅಮಾಯಕರು ಬಲಿಯಾಗುವುದು,ಜೈಲು ಸೇರುವುದು ನಡೆಯುತ್ತಿದೆ ಎಂದರು.
ಸುಳ್ಯ ದಲ್ಲಿ ನಡೆದ ಮಸೂದ್ ಮತ್ತು ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಸರಕಾರ ನಿರ್ಲಕ್ಷ್ಯ ವಹಿಸಿ ರುವುದು ಕಂಡು ಬರುತ್ತದೆ. ಸರ್ಕಾರ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳುವಲ್ಲಿ ವಿಫಲವಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ಹತ್ಯೆಗಳು ನಡೆಯುತ್ತವೆ. ಹಣ, ಅಧಿಕಾರದ ಕಾರಣಕ್ಕಾಗಿ ಈ ರೀತಿಯ ಹತ್ಯೆ ಗೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈ ಗೊಂಡರೆ ಜಿಲ್ಲೆ ಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯ. ದ್ವೇಷಕ್ಕೆ ದ್ವೇಷ , ಹಿಂಸೆ ಗೆ ಹಿಂಸೆ ಉತ್ತರವಲ್ಲ ಎಂದು ಹೇಳಿದರು.
ಮಸೂದ್, ಪ್ರವೀಣ್ ಹತ್ಯೆಗೆ ಸಂಬಂಧಿಸಿ ಯಾವುದೇ ತಾರತಮ್ಯ ಮಾಡದೆ ಶಿವಮೊಗ್ಗದಲ್ಲಿ ಹರ್ಷ ಕುಟುಂಬಕ್ಕೆ ನೀಡಿದಂತೆ ಕನಿಷ್ಠ ತಲಾ ₹ 25ಲಕ್ಷ ಪರಿಹಾರ ನೀಡಬೇಕು .ನೈಜ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈ ಗೊಳ್ಳಬೇಕು ಎಂದರು.
ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಹರಿನಾಥ್, ಶುಭೋದಯ ಆಳ್ವ, ಪ್ರಕಾಶ್ ಸಾಲ್ಯಾನ, ವಿಶ್ವಾಸ್ ಕುಮಾರ್ ದಾಸ್, ಪುರುಷೋತ್ತಮ ಚಿತ್ರಾಪುರ, ಉಮೇಶ್ ದಂಡಕೇರಿ, ಪ್ರತಿಭಾ ಕುಳಾಯಿ, ಪದ್ಮನಾಭ ಅಮೀನ್, ದೀಪಕ್ ಪೂಜಾರಿ, ನೀರಜ್ ಪಾಲ್, ರಮಾನಂದ, ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.