ಮಂಗಳೂರು: ‘ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರತಿ ಮನೆಗೂ ನೀರು ಒದಗಿಸುವ ಭರವಸೆ ಈಡೇರಿಸಲು ಎಲ್ಲ ಪ್ರಯತ್ನವನ್ನೂ ಮಾಡುತ್ತೇವೆ’ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಿರಂತರ ಕುಡಿಯುವ ನೀರು ಒದಗಿಸುವ ಜಲಸಿರಿ ಯೋಜನೆಯ ಭಾಗವಾಗಿ ಬಜಾಲ್ ಪರಿಸರದಲ್ಲಿ ₹4.60 ಕೋಟಿ ವೆಚ್ಚದ ಮೇಲ್ಮಟ್ಟದ ಜಲಸಂಗ್ರಹಾಗಾರಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಜಲಸಿರಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ನೀರು ಸಂಗ್ರಹಿಸಲು ಸಮರ್ಪಕವಾದ ಸಂಗ್ರಹಾಗಾರಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.
ಬಜಾಲ್ ಪರಿಸರದಲ್ಲಿ ನಿರ್ಮಾಣವಾಗುವ 20 ಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯದ ಜಲಸಂಗ್ರಹಾಗಾರದಿಂದ ವೆಲೆನ್ಸಿಯಾ, ಕಂಕನಾಡಿ, ಅಳಪೆ ದಕ್ಷಿಣ, ಜಪ್ಪಿನಮೊಗರು ವಾರ್ಡಿನ ಸುಮಾರು 4,086 ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ. ಯೋಜನೆ ಪೂರ್ಣಗೊಂಡ ಬಳಿಕ ಪ್ರತಿ ಮನೆಗೂ 24 ಗಂಟೆ ನೀರು ಒದಗಿಸುವ ಕನಸು ನನಸಾಗಲಿದೆ ಎಂದು ಹೇಳಿದರು.
ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ‘ಜಲಸಿರಿ ಯೋಜನೆಗೆ ಶಾಸಕರ ಮುತುವರ್ಜಿಯಿಂದ ಸುಮಾರು ₹750 ಕೋಟಿ ಅನುದಾನ ಬಿಡುಗಡೆಯಾಗಿದೆ. ಶಾಸಕರ ಮಾರ್ಗದರ್ಶನದಲ್ಲಿ ಯೋಜನೆಯನ್ನು ಸಾಧ್ಯವಾದಷ್ಟು ಬೇಗನೆ ಪೂರ್ಣಗೊಳಿಸಲು ಶ್ರಮಿಸುತ್ತೇವೆ’ ಎಂದರು.
ಉಪ ಮೇಯರ್ ಸುಮಂಗಲಾ ರಾವ್, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಂದೀಪ್ ಗರೋಡಿ, ಪಾಲಿಕೆ ಸದಸ್ಯರಾದ ಶೋಭಾ ಪೂಜಾರಿ, ವೀಣಾ ಮಂಗಳ, ಭಾಸ್ಕರ್ ಚಂದ್ರ ಶೆಟ್ಟಿ, ಮುಖಂಡರಾದ ಕಿರಣ್ ರೈ ಎಕ್ಕೂರು, ಸುಕೇಶ್ ಶೆಟ್ಟಿ, ವಸಂತ್ ಜೆ. ಪೂಜಾರಿ, ಭರತ್ ಶೆಟ್ಟಿ, ಸುಜಾತಾ, ರಾಮ್ ಪ್ರಸಾದ್, ಈಶ್ವರ್, ವೀರೇಂದ್ರ, ವಿಶ್ವನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.