ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ - ಕೊಡಗು ಜಿಲ್ಲೆಗಳ ಗಡಿಯಲ್ಲಿ ಸೋಮವಾರ ಮತ್ತೊಮ್ಮೆ ಭೂಮಿ ಕಂಪಿಸಿದ ಅನುಭವ ಆಗಿದೆ. ಇದರಿಂದ ಈ ಪ್ರದೇಶದ ನಿವಾಸಿಗಳು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.
ಸುಳ್ಯ ತಾಲ್ಲೂಕಿನ ಕಲ್ಮಕಾರು ಹಾಗೂ ಕಲ್ಲುಗುಂಡಿ ಪರಿಸರದಲ್ಲಿ ಭಾನುವಾರ ಸಂಜೆ ವೇಳೆ ಭೂಮಿ ಕಂಪಿಸಿದ ಬಗ್ಗೆ ಸ್ಥಳೀಯ ಜನರು ಮಾಹಿತಿ ನೀಡಿದ್ದಾರೆ.
ಕಲ್ಮಕಾರು ಪರಿಸರದಲ್ಲಿ ಸಂಜೆ ಅಂದಾಜು 6.30ರ ಸುಮಾರಿಗೆ ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿರುವುದಾಗಿ ತಿಳಿದು ಬಂದಿದೆ. ತಾಲೂಕಿನ ಕಲ್ಮಕಾರು, ಮೆಂಟೆಕಜೆ, ಗುಳಿಕ್ಕಾನ ಪ್ರದೇಶದಲ್ಲಿ ಕಂಪನ ಅನುಭವವಾಗಿದೆ. ಉಂಟಾದ ಶಬ್ದ ಕೊಲ್ಲಮೊಗ್ರದವರೆಗೆ ಕೇಳಿರುವುದಾಗಿ ತಿಳಿದು ಬಂದಿದೆ.
ಆಗಸ್ಟ್ 1ರಂದು ಸುರಿದಿದ್ದ ಭಾರಿ ಮಳೆಗೆ ಭೂಕುಸಿತ ಸಂಭವಿಸಿ ಕಲ್ಮಕಾರು, ಕಲ್ಲುಗುಂಡಿ ವ್ಯಾಪ್ತಿಯಲ್ಲಿ ಬಹಳಷ್ಟು ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗಿತ್ತು. ಅನೇಕ ಮನೆಗಳು ಹಾಗೂ ತೋಟಗಳು ಜಲಾವೃತಗೊಂಡಿದ್ದವು. ಮತ್ತೆ ಮಳೆ ಕಡಿಮೆಯಾಗಿ, ಜನ ತುಸು ನಿಟ್ಟುಸಿರು ಬಿಟ್ಟಿದ್ದರು. ಈಗ ಮತ್ತೊಮ್ಮೆ ಭೂಮಿ ಕಂಪಿಸಿರುವುದು ಜನತೆಯಲ್ಲಿ ಮತ್ತೆ ಕಳವಳ ಮೂಡಿಸಿದೆ.
ಕಳೆದ ಒಂದೂವರೆ ತಿಂಗಳ ಹಿಂದೆ ಸುಳ್ಯ ತಾಲೂಕಿನ ಕೆಲವೆಡೆ ಭೂಮಿ ಏಳೆಂಟು ಬಾರಿ ಕಂಪಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.