ಉಜಿರೆ: ಪ್ರತಿ ಸಸ್ಯದಲ್ಲೂ ಔಷಧೀಯ ಗುಣಗಳಿದ್ದು, ಹಸಿರು ಕ್ರಾಂತಿಯ ಮೂಲಕ ಪ್ರಾಕೃತಿಕ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯೂ, ಕರ್ತವ್ಯವೂ ಆಗಿದೆ ಎಂದು ಎಸ್ಡಿಎಂ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಬಿ.ಎ.ಕುಮಾರ ಹೆಗ್ಡೆ ಹೇಳಿದರು.
ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ನಿವೃತ್ತ ಪ್ರಾಂಶುಪಾಲ ದಿ.ಬಿ.ಯಶೋವರ್ಮ ಅವರ ಜನ್ಮದಿನಾಚರಣೆ ಸ್ಮರಣಾರ್ಥ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ ‘ಸಸ್ಯವಿಜ್ಞಾನದಲ್ಲಿ ಇತ್ತೀಚಿನ ಬೆಳವಣಿಗೆಗಳು’ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಸ್ಯವಿಜ್ಞಾನಿಯೂ, ದಕ್ಷ ಆಡಳಿತಗಾರರೂ ಆಗಿದ್ದ ಬಿ.ಯಶೋವರ್ಮ ಅವರು 23ವರ್ಷ ಕಾಲೇಜಿನ ಪ್ರಾಂಶುಪಾಲರಾಗಿ 18 ವರ್ಷ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಉಜಿರೆಯನ್ನು ಜ್ಞಾನಕಾಶಿಯಾಗಿಯೂ, ಸಸ್ಯಕಾಶಿಯಾಗಿಯೂ ಬೆಳೆಸಿದ್ದಾರೆ. ಸಿದ್ಧವನದ ಬಳಿ ಗಿಡಮೂಲಿಕೆಗಳ ಸಸ್ಯೋದ್ಯಾನ, ಕಾಲೇಜು ವಠಾರದಲ್ಲಿ ಸುಂದರ ಉದ್ಯಾನ, ಔಷಧೀಯ ಗಿಡಗಳು, ಎಲ್ಲ ಶಾಲೆ-ಕಾಲೇಜುಗಳ ಪರಿಸರದಲ್ಲಿ ಉದ್ಯಾನ, ವಿದ್ಯಾರ್ಥಿನಿಲಯಗಳಲ್ಲಿ ಬಳಸಿದ ನೀರನ್ನು ಉದ್ಯಾನ, ಗಿಡಗಳಿಗೆ ಮರುಬಳಕೆ ಮಾಡುವಂತೆ ಯೋಜನೆ ರೂಪಿಸಿದ್ದರು ಎಂದರು.
ವಿಚಾರ ಸಂಕಿರಣ ಉದ್ಘಾಟಿಸಿದ ಡಾ.ಪ್ರದೀಪ್ ನಾವೂರು, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯೊಂದಿಗೆ ಸಸ್ಯಗಳ ಬಗ್ಗೆ ವಿಶೇಷ ಅಧ್ಯಯನ ಹಾಗೂ ಸಂಶೋಧನೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಇದರ ಬಗ್ಗೆ ಆಸಕ್ತಿ ಮತ್ತು ಕುತೂಹಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರಸ್ತುತ ಫಿನ್ಲ್ಯಾಂಡ್ನ ಟಾಂಪೆರೆ ವಿಶ್ವವಿದ್ಯಾಲಯದ ಪ್ರೊ.ನೋಣಪ್ಪ ಮಾತನಾಡಿ, ಕಾಲೇಜು ಹಾಗೂ ಸಿದ್ಧವನ ಗುರುಕುಲದಲ್ಲಿ ಬಿ.ಯಶೋವರ್ಮ ಹಾಗೂ ಪ್ರೊ.ಕುಮಾರ ಹೆಗ್ಡೆಯವರ ಶಿಕ್ಷಣಕ್ಕೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿದ್ದರು ಎಂದರು.
ಮಣಿಪಾಲದ ಎಂಐಟಿಯ ಪ್ರೊ.ನರಸಿಂಹನ್, ವಿಧುಶಂಕರ್ ಬಾಬು ಮಾತನಾಡಿದರು.
ಪ್ರೊ.ಶಕುಂತಳಾ ಸ್ವಾಗತಿಸಿದರು. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉಪನ್ಯಾಸಕಿ ಮಂಜುಶ್ರೀ ವಂದಿಸಿದರು. ಉಪನ್ಯಾಸಕ ಅಭಿಲಾಶ್ ಕೆ.ಎಸ್.ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.