ADVERTISEMENT

ಉಚಿತ ಬಸ್‌ನಲ್ಲಿ ಫಲಾನುಭವಿ: ಮೋದಿ ಜನಪ್ರಿಯತೆ ಕುಗ್ಗಿರುವುದರ ಸಾುಕ್ಷಿ– ಬಂಗೇರ

ಸಭೆಗೆ ಕೇಂದ್ರ ಸರ್ಕಾರದ ಫಲಾನುಭವಿಗಳು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 13:11 IST
Last Updated 1 ಸೆಪ್ಟೆಂಬರ್ 2022, 13:11 IST

ಬೆಳ್ತಂಗಡಿ:‘ಜಿಲ್ಲಾನ್ನು ನೀಡಿ, ಸರ್ಕಾರದ ವಿವಿಧ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಸೇರಿಸುತ್ತಿರುವುದು ಮೋದಿಯವರ ಜನಪ್ರಿಯತೆ ಕುಗ್ಗಿರುವುದಕ್ಕೆ ಸಾಕ್ಷಿ’ ಎಂದು ಕಾಂಗ್ರೆಸ್‌ ಮುಖಂಡ ವಸಂತ ಬಂಗೇರ ಟೀಕಿಸಿದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಬಿಜೆಪಿಯ ಏಳು ಶಾಸಕರು, ಸಂಸದರು ಇದ್ದಾರೆ. ಆದರೆ, ಮೋದಿ ಕಾರ್ಯಕ್ರಮಕ್ಕೆ ಜನ ಸೇರಿಸಲು ಅಧಿಕಾರಿಗಳನ್ನು ಪಕ್ಷದ ಏಜೆಂಟರಂತೆ ಬಳಸಿಕೊಳ್ಳುತ್ತಿದ್ದಾರೆ. ಒತ್ತಾಯ ಪೂರ್ವಕವಾಗಿ, ಬಲತ್ಕಾರವಾಗಿ ಜನರನ್ನು ಕರೆದುಕೊಂಡು ಹೋಗುತ್ತಿದ್ದಾರೆ’ ಎಂದು ಆರೋಪಿಸಿದರು.

‘ಈ ಕಾರ್ಯಕ್ರಮವು ಮುಂದಿನ ವಿಧಾನಸಭಾ ಚುನಾವಣೆಗೆ ಪೂರ್ವತಯಾರಿ. ಸಂಸದ, ಶಾಸಕರ ವಿರುದ್ಧದ ಅಸಮಾಧಾನದಿಂದ ಜನರು ಬರುವುದಿಲ್ಲ ಎಂಬುದು ಬಿಜೆಪಿ ಮುಖಂಡರಿಗೆ ಗೊತ್ತಾಗಿದೆ. ಅದಕ್ಕಾಗಿ ಜಿಲ್ಲಾಡಳಿತದ ಮೂಲಕ ಫಲಾನುಭವಿಗಳನ್ನು ಕರತರಲು ಮುಂದಾಗಿದೆ. ಈ ಸ್ಥಿತಿಗೆ ಬಂದಿರುವುದು ಬಿಜೆಪಿಯ ದುರಂತ’ ಎಂದರು.

ADVERTISEMENT

‘ಬಿಜೆಪಿಯ ಯೋಜನೆಗಳು ಪ್ರಚಾರದಲ್ಲಿ ಇವೆಯೇ ಹೊರತು ಅನುಷ್ಠಾನದಲ್ಲಿ ಇಲ್ಲ. ದಿನಬಳಕೆಯ ವಸ್ತುಗಳ, ಅಡುಗೆ ಅನಿಲ, ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ ಸೇರಿದಂತೆ ನಿರುದ್ಯೋಗ ಸಮಸ್ಯೆ, ರೈತರ ಸಮಸ್ಯೆ, ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ಸೇರಿದಂತೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದ ದೇಶದ ಜನತೆ ಅಕ್ರೋಶ ಭರಿತರಾಗಿದ್ದು, ಮೋದಿಯವರ ಸಭೆಗಳಲ್ಲಿ ಭಾಗವಹಿಸುತ್ತಿಲ್ಲ. ಮೋದಿಯವರು ಯಾವಾಗಲೂ ಸುಳ್ಳು ಹೇಳಿ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಅರಿತುಕೊಂಡರೆ ಉತ್ತಮ’ ಎಂದರು.

‘ಜಿಲ್ಲೆಯಲ್ಲಿ ಪ್ರಜ್ಞಾವಂತರಾದ ಯುವಜನತೆ ಬಿಜೆಪಿ, ಸಂಘಪರಿವಾರದಿಂದ ಹೊರ ಬರುತ್ತಿದ್ದಾರೆ. ಬಿಜೆಪಿ ಜಿಲ್ಲಾಡಳಿತವನ್ನು ಬಳಸಿಕೊಳ್ಳುವುದಕ್ಕೆ ನಮ್ಮ ವಿರೋಧವಿದೆ. ನಾವು ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಸಿಪಿಎಂ ಮುಖಂಡ ಶೇಖರ್ ಎಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.