ಮಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮರವೂರು ಬಳಿ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಸ್ಥಳಕ್ಕೆ ಗುರುವಾರ ಬೆಂಗಳೂರಿನ ತಾಂತ್ರಿಕ ಪರಿಣಿತರ ತಂಡ ಭೇಟಿ ನೀಡಿ, ಪರಿಶೀಲಿಸಿತು.
ಮುಖ್ಯ ಎಂಜಿನಿಯರ್ ಆರ್.ಕೆ. ಜಯಗೋಪಾಲ್ ನೇತೃತ್ವದ ತಂಡವು ಸೇತುವೆಯಲ್ಲಿ ಕಾಣಿಸಿಕೊಂಡಿರುವ ಬಿರುಕು, ಕುಸಿದ ಭಾಗಗಳನ್ನು ಪರಿಶೀಲಿಸಿದೆ. ಇದರ ಪೂರ್ಣ ಅಧ್ಯಯನ ನಡೆಸಿದ ನಂತರ ಇನ್ನು ಎರಡು ದಿನಗಳಲ್ಲಿ ಈ ತಂಡ, ಸೇತುವೆಯನ್ನು ದುರಸ್ತಿಗೊಳಿಸಬಹುದಾದ ಸಾಧ್ಯತೆಗಳ ಬಗ್ಗೆ ವರದಿ ನೀಡಲಿದೆ.
ಈ ವರದಿ ಆಧರಿಸಿ, ಲೋಕೋಪಯೋಗಿ ಇಲಾಖೆ ಇನ್ನು ಒಂದು ತಿಂಗಳ ಒಳಗಾಗಿ ಸೇತುವೆಯನ್ನು ದುರಸ್ತಿಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಪಿಲ್ಲರ್ ಕುಸಿದ ಸ್ಥಳದಲ್ಲಿ ನೀರಿನ ಹರಿವು ಕಡಿಮೆ ಮಾಡಲು ಬುಧವಾರ ಕಲ್ಲುಗಳನ್ನು ಪೇರಿಸಿಡಲಾಗಿದೆ. ಮುಂದಿನ ಕಾಮಗಾರಿ ನಡೆಸಲು ಇದು ಪೂರಕವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.