ಮಂಗಳೂರು: ಕೆರೆಗಳು ಕರಾವಳಿಯ ಅಂತರ್ಜಲ ನಿರ್ವಹಣೆಯ ಜೊತೆ ಜೈವಿಕ ವ್ಯವಸ್ಥೆಯಲ್ಲಿ ಸಮತೋಲನದಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಾ ಬಂದಿವೆ. ಹವಾಮಾನ ವೈಪರೀತ್ಯದಿಂದ ಉಷ್ಣಾಂಶ ಗಣನೀಯವಾಗಿ ಹೆಚ್ಚುತ್ತಿರುವ ಇಂದಿನ ಸನ್ನಿವೇಶದಲ್ಲಿ ಕೆರೆಗಳನ್ನು ಉಳಿಸಿಕೊಳ್ಳುವ ಅನಿವಾರ್ಯ ಹಿಂದೆಂದಿಗಿಂತಲೂ ಹೆಚ್ಚು ಇದೆ ಎನ್ನುತ್ತಾರೆ ಜಲ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ತಜ್ಞರು.
ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ಆಸುಪಾಸಿನ ಕೆರೆಗಳ ವಸ್ತು ಸ್ಥಿತಿ ತೆರೆದಿಟ್ಟ ಕೆರೆ– ಕಥೆ–ವ್ಯಥೆ ಸರಣಿಯ ಬಗ್ಗೆ ಪ್ರತಿಕ್ರಿಯಿಸಿದ ಜಲಸಂರಕ್ಷಣಾ ತಜ್ಞರು, ಜಲಮೂಲಗಳ ಸಂರಕ್ಷಣೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಪ್ರಯತ್ನ ಎಂದರು.
‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೋರು ಮಳೆಯಾಗುವಾಗ ನೀರನ್ನು ಅಲ್ಲಲ್ಲಿ ಸಂಗ್ರಹಿಸಿ ಅವು ಅಂತರ್ಜಲವನ್ನು ಸೇರುವಂತೆ ಮಾಡುವ ಮೂಲಕ ಪ್ರವಾಹ ನಿಯಂತ್ರಣದಲ್ಲಿ ಮಹತ್ವದ ಪಾತ್ರ ನಿರ್ವಹಿಸುವುದು ಕೆರೆಗಳು. ಜಿಲ್ಲೆಯಲ್ಲಿ ಕೊಳವೆಬಾವಿಗಳ ಸಂಖ್ಯೆ ಹೆಚ್ಚುತ್ತಾ ಸಾಗಿದಂತೆ ಅಂತರ್ಜಮಟ್ಟ ವರ್ಷದಿಂದ ವರ್ಷಕ್ಕ ಪಾತಾಳಕ್ಕೆ ಕುಸಿಯುತ್ತಿದೆ. ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳುವಲ್ಲೂ ಕೆರೆಗಳ ಕೊಡುಗೆ ಪ್ರಮುಖವಾದುದು’ ಎನ್ನುತ್ತಾರೆ ಜಲ ಸಂರಕ್ಷಣಾ ತಜ್ಞ ಜಗದೀಶ ಬಾಳ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷದಲ್ಲಿ ಸರಾಸರಿ 3500 ಮಿಲಿ ಮೀಟರ್ನಿಂದ 4000 ಮಿಲಿ ಮೀಟರ್ನಷ್ಟು ಮಳೆಯಾಗುತ್ತದೆ. ಒಂದು ಎಕರೆ ಪ್ರದೇಶದಲ್ಲಿ 1.64 ಲಕ್ಷ ಕೋಟಿ ಲೀಟರ್ಗಳಷ್ಟು ಮಳೆ ನೀರು ಬೀಳುತ್ತದೆ. ಒಂದು ಅರ್ಧ ಎಕರೆಯಷ್ಟು ವಿಸ್ತೀರ್ಣದ ಕೆರೆ ಇದ್ದರೂ ಅದು ಭೂಮಿಯ ಮೇಲ್ಮೈನಲ್ಲಿ ಹರಿಯುವ ಸುಮಾರು 80 ಲಕ್ಷ ಲೀಟರ್ನಷ್ಟು ನೀರು ನೆಲದೊಳಗೆ ಬಸಿದು ಹೋಗುವಂತೆ ಮಾಡಬಲ್ಲುದು ಎನ್ನುತ್ತಾರೆ ಜಲ ಸಂರಕ್ಷಣಾ ತಜ್ಞ ಜೋಸೆಫ್ ಎನ್.ಎಂ.
‘ಸುತ್ತಲಿನ ಎತ್ತರದ ಪ್ರದೇಶದಿಂದ ಭೂಮಿಯ ಮೇಲ್ಮೈನಲ್ಲಿ ಹರಿದು ಬರುವ ನೀರು ನೇರವಾಗಿ ಕೆರೆಯ ಒಡಲನ್ನು ಸೇರುವುದಕ್ಕೆ ಅವಕಾಶ ಕಲ್ಪಿಸಬಾರದು. ಕೆರೆಯ ಜಲಾನಯನ ಪ್ರದೇಶದಲ್ಲಿ 15ರಿಂದ 20 ಮೀ ದೂರದಲ್ಲಿ ಸುತ್ತ ಇಂಗು ಗುಂಡಿಗಳನ್ನು ನಿರ್ಮಿಸಿ, ಗಿಡ ಮರಗಳನ್ನು ಬೆಳೆಸಬೇಕು. ಮಳೆ ನೀರು ನೆಲದ ಮೇಲ್ಮ್ಮೈನಿಂದ ಕೆಳಗಿರುವ ಮಣ್ಣಿನ ಪದರದ ಮೂಲಕ ಅಂತರ್ಜಲ ಸೇರಿ ಅದರ ಮೂಲಕ ಕೆರೆಯ ಒಡಲನ್ನು ಸೇರಬೇಕು. ಇದಕ್ಕೆ ವ್ಯವಸ್ಥೆ ರೂಪಿಸಿದ್ದೇ ಆದರೆ ಕೆರೆಗಳ ನೀರು ಶುದ್ಧವಾಗಿರುತ್ತದೆ. ಅದನ್ನು ಕುಡಿಯುವುದಕ್ಕೂ ಬಳಸಬಹುದು. ಕರಾವಳಿ ದೇವಸ್ಥಾನಗಳ ಕಲ್ಯಾಣಿಗಳಲ್ಲಿ ಇದೇ ತಂತ್ರವನ್ನು ಅನುಸರಿಸುತ್ತಾ ಬರಲಾಗುತ್ತಿದೆ. ಕೆರೆ ಸಂರಕ್ಷಣೆ ವೇಳೆ ಇಂತಹ ಅಂಶಗಳಿಗೆ ಮಹತ್ವ ನೀಡಬೇಕು’ ಎಂದು ಅವರು ವಿವರಿಸಿದರು.
ಕೆರೆಯ ಆಳ ವರ್ಷದಿಂದ ಕಡಿಮೆಯಾಗುತ್ತಾ ಹೋದರೆ ಅದು ಕ್ರಮೇಣ ಹೂಳಿನಿಂದ ಮುಚ್ಚಿ ಹೋಗುತ್ತದೆ. ಪ್ರತಿ ವರ್ಷವೂ ಹೂಳೆತ್ತುವ ವ್ಯವಸ್ಥೆ ಮಾಡಬೇಕು. ಕೆರೆಯ ಜೈವಿಕ ವ್ಯವಸ್ಥೆಯನ್ನು ಕಾಪಾಡಬೇಕು ಎಂದು ಅವರು ಸಲಹೆ ನೀಡಿದರು. ರೆ ಮತ್ತಿತರ ಜಲಮೂಲಗಳ ಸಂರಕ್ಷಣೆಗೆ ಸಮಗ್ರವಾದ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುವ ಅಗತ್ಯವಿದೆ. ಕೆರೆಯನ್ನು ಭೌತಿಕವಾಗಿ ಅಭಿವೃದ್ಧಿಪಡಿಸಲು ಎಷ್ಟು ಹಣ ಖರ್ಚು ಮಾಡಿದರೂ ಪ್ರಯೊಜನವಾಗದು
ಮನುಷ್ಯ ಮಾತ್ರವಲ್ಲ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳು ಬಾಯಾರಿಕೆ ನೀಗಿಸಿಕೊಳ್ಳಲು ಹೆಚ್ಚಿನ ತಾಪಮಾನದಿಂದ ರಕ್ಷಣೆ ಪಡೆಯಲು ನೈಸರ್ಗಿಕ ನೀರಿನ ಮೂಲಗಳಾದ ಕೆರೆಗಳೇ ಆಸರೆಜಗದೀಶ ಬಾಳ ಜಲಸಂರಕ್ಷಣೆ ತಜ್ಞ
ರೆ ಮತ್ತಿತರ ಜಲಮೂಲಗಳ ಸಂರಕ್ಷಣೆಗೆ ಸಮಗ್ರವಾದ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುವ ಅಗತ್ಯವಿದೆ. ಕೆರೆಯನ್ನು ಭೌತಿಕವಾಗಿ ಅಭಿವೃದ್ಧಿಪಡಿಸಲು ಎಷ್ಟು ಹಣ ಖರ್ಚು ಮಾಡಿದರೂ ಪ್ರಯೊಜನವಾಗದುಕೆಜೋಸೆಫ್ ಎನ್.ಎಂ. ಜಲ ಸಂರಕ್ಷಣಾ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.