
ಬಂಧನ
ವಿಟ್ಲ (ದಕ್ಷಿಣ ಕನ್ನಡ): ಸುಳ್ಳು ದಾಖಲೆ ನೀಡಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಪಾಸ್ಪೋರ್ಟ್ ಪಡೆಯಲು ನೆರವಾಗಿದ್ದ ಹಾಗೂ ಆ ವ್ಯಕ್ತಿಗೆ ಪೊಲೀಸ್ ನಿರಾಕ್ಷೇಪಣ ಪತ್ರ ಒದಗಿಸಿದ್ದ ಕಡತ ನಾಶಪಡಿಸಿದ ಆರೋಪದ ಮೇಲೆ ವಿಟ್ಲ ಠಾಣೆಯ ಕಾನ್ಸ್ಟೆಬಲ್ ಪ್ರದೀಪ್ ಎಂಬಾತನನ್ನು ಅದೇ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸದ್ಯ ನ್ಯಾಯಾಂಗ ಬಂಧನ ಇದ್ದಾರೆ. ಅಕ್ರಮವಾಗಿ ಪಾಸ್ ಪೋರ್ಟ್ ಪಡೆದಿದ್ದ ಶಕ್ತಿದಾಸ್ ಎಂಬಾತನಿಗೆ, ನಿರಾಕ್ಷೇಪಣ ಪತ್ರ ಒದಗಿಸಲು ಪ್ರದೀಪ್ ನೆರವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
‘ಸುಳ್ಳುದಾಖಲೆಗಳನ್ನು ಸಲ್ಲಿಸಿದ್ದ ಆರೋಪಿ ಶಕ್ತಿದಾಸ್ ವಿರುದ್ದವೂ ಪ್ರಕರಣ ದಾಖಲಾಗಿದೆ. ಆತ ‘ನಾನು ಪಶ್ಚಿಮ ಬಂಗಾಳದವನು ಎಂದಿದ್ದು, ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದ್ದಾರೆ.
‘ಶಕ್ತಿದಾಸ್ 2025ನೇ ಫೆಬ್ರುವರಿಯಲ್ಲಿ ಪಾಸ್ಪೋರ್ಟ್ ಮಾಡಿಸಲು ಅರ್ಜಿ ಸಲ್ಲಿಸಿದ್ದ. ಆ ಕುರಿತು ಪೊಲೀಸರು ಪರಿಶೀಲಿಸಿದಾಗ ಅರ್ಜಿದಾರನ ವಿಳಾಸ, ದಾಖಲಾತಿಗಳಲ್ಲಿದ್ದ ವಿಳಾಸಕ್ಕೆ ತಾಳೆಯಾಗಿರಲಿಲ್ಲ. ಹಾಗಾಗಿ ಆತನ ಅರ್ಜಿ ಪುರಸ್ಕರಿಸದಂತೆ ವಿಟ್ಲ ಠಾಣೆ ಪೊಲೀಸರು ಶಿಫಾರಸು ಮಾಡಿದ್ದರು.’
‘ಅರ್ಜಿ ತಿರಸ್ಕೃತಗೊಂಡ ಬಳಿಕ ಶಕ್ತಿದಾಸ್ 2025ರ ಜೂನ್ನಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದ. ಆಗ ಪ್ರದೀಪ್, ಆ ಅರ್ಜಿದಾರರ ವಿಳಾಸವಿರುವ ಪ್ರದೇಶದಲ್ಲಿ ಗಸ್ತು ಹೊಣೆ ಹೊತ್ತಿದ್ದ ಕಾನ್ಸ್ಟೆಬಲ್ ಸಾಬು ಮಿರ್ಜಿ ಅರಿವಿಗೆ ಬಾರದಂತೆ, ಅವರ ಹೆಸರಿನಲ್ಲೇ ವರದಿ ತಯಾರಿಸಿದ್ದ. ಸಾಬು ಮಿರ್ಜಿ ಸಹಿಯನ್ನೂ ಫೋರ್ಜರಿ ಮಾಡಿ, ಮೇಲಧಿಕಾರಿಯವರ ಶಿಫಾರಸು ಮಾಡಿಸಿ ಪಾಸ್ಪೋರ್ಟ್ ಇಲಾಖೆಗೆ ಕಳುಹಿಸಿಕೊಟ್ಟಿದ್ದ. ಈ ವಿಷಯ ಯಾರಿಗೂ ಗೊತ್ತಾಗಬಾರದು ಎಂದು ಪರಿಶೀಲಿಸಿದ್ದ ದಾಖಲೆಗಳನ್ನು ನಾಶಪಡಿಸಿದ್ದ. 2025ರ ಡಿ. 12ರಂದು ದಾಖಲೆಗಳನ್ನು ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.