ಬದಿಯಡ್ಕ: ಮುಳ್ಳೇರಿಯದ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೊ–ಆಪರೇಟಿವ್ ಸೊಸೈಟಿಯ ಕಾರ್ಯದರ್ಶಿ ಕೆ.ರತೀಶ್ ಅವರು ಈಡಿನ ಚಿನ್ನಾಭರಣ ವಂಚಿಸಿ ಸೋಮವಾರದಿಂದ ನಾಪತ್ತೆಯಾಗಿರುವುದಾಗಿ ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬ್ಯಾಂಕ್ ಅಧ್ಯಕ್ಷ ಬೆಳ್ಳೂರು ನಾಟೆಕಲ್ಲಿನ ಸೂಫಿ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಸುಮಾರು ₹ 4.75 ಕೋಟಿ ವಂಚನೆಯನ್ನು ಪತ್ತೆಹಚ್ಚಲಾಗಿದೆ. ರತೀಶ್ ಅವರು ಸಿಪಿಎಂ ಮುಳ್ಳೇರಿಯ ವಲಯ ಸಮಿತಿಯ ಸದಸ್ಯರಾಗಿದ್ದು, ಕರ್ಮಂತೋಡಿಯ ನಿವಾಸಿಯಾಗಿದ್ದಾರೆ. ಸೊಸೈಟಿಯ ಸದಸ್ಯರ ಹೆಸರಲ್ಲಿ, ಅವರಿಗೆ ತಿಳಿಯದಂತೆ ಸುಮಾರು ₹ 7 ಲಕ್ಷದ ವರೆಗೆ ಪ್ರತಿ ಸದಸ್ಯರ ಹೆಸರಿನಲ್ಲಿ ಸಾಲ ತೆಗೆದುಕೊಂಡಿದ್ದು, ಮಾರ್ಚ್ ತಿಂಗಳಲ್ಲಿ ವಾರ್ಷಿಕ ಲೆಕ್ಕ ಪರಿಶೋಧಕರು ಬಂದಾಗ, ಈ ಅವ್ಯವಹಾರ ನಡೆದಿರುವುದು ಗೊತ್ತಾಗಿದೆ. ಒಂದು ತಿಂಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ರತೀಶ್ ತಿಳಿಸಿದ್ದರು ಎನ್ನಲಾಗಿದೆ.
ಈ ಬಗ್ಗೆ ನಾಟೆಕಲ್ಲಿನ ಸೂಫಿ ಅವರು ಪೊಲೀಸರಿಗೆ ದೂರು ನೀಡಿದ ತಕ್ಷಣ ರತೀಶ್ ನಾಪತ್ತೆಯಾಗಿದ್ದಾರೆ. ಪ್ರಕರಣ ಗೊತ್ತಾಗುತ್ತಿದ್ದಂತೆ ರತೀಶ್ ಅವರು ಅವ್ಯವಹಾರ ಸರಿಪಡಿಸುವುದಾಗಿ ಅನೇಕರಲ್ಲಿ ಹೇಳಿದ್ದರು ಎನ್ನಲಾಗಿದ್ದು, ಇದೀಗ ಸೈಬರ್ ಸೆಲ್ ಮೂಲಕ ಹುಡುಕಾಟ ನಡೆಸಿದಾಗ, ರತೀಶ್ ಬೆಂಗಳೂರಿಗೆ ತಲುಪಿರಬಹುದು ಎನ್ನಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.