ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಕೃಷಿಯನ್ನೇ ನಂಬಿಕೊಂಡ ಕೃಷಿಕರಿದ್ದಾರೆ. ಆದರೆ, ಅಡಿಕೆ ಕೃಷಿಯೊಂದಿಗೆ ಮೀನುಕೃಷಿಯನ್ನೂ ನಡೆಸಿ ಲಾಭಗಳಿಸಬಹುದು. ಕೃಷಿಕರು ಮೀನು ಸಾಕಾಣಿಕೆಗೆ ಒತ್ತು ನೀಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಒಳನಾಡು ಜಲಕೃಷಿ ಪ್ರಾತ್ಯಕ್ಷಿಕೆಗಾಗಿ ಮೀನುಗಾರಿಕಾ ಇಲಾಖೆಯಿಂದ ನೀಡಲಾದ ಉಚಿತ ಮೀನು ಮರಿ ವಿತರಣಾ ಕಾರ್ಯಕ್ರಮವನ್ನು ಪುತ್ತೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮೀನು, ಕೋಳಿ ಸಾಕಾಣಿಕೆಯಿಂದ ಆಹಾರ ಮಾತ್ರವಲ್ಲದೆ ಲಾಭಗಳಿಸಲೂ ಸಾಧ್ಯವಿದೆ. ಇಂದು ನದಿ, ಹೊಳೆಯಲ್ಲಿ ಮೀನಿನ ಸಂತತಿ ಕಡಿಮೆಯಾಗುತ್ತಿದೆ. ಮೀನಿನ ಕೊರತೆ ಕಾಣುತ್ತಿದೆ. ನದಿಗಳಿಗೆ ಸ್ಫೋಟಕ ಬಳಸಿ ಮೀನು ಹಿಡಿಯುವವರನ್ನು ಸಾರ್ವಜನಿಕರು ವಿರೋಧಿಸಬೇಕು. ಕೃಷಿಕರು ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬನೆ ಸಾಧಿಸಬೇಕು ಎಂದು ಅವರು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಭಾಗವಹಿಸಿದ್ದರು.
ಫಲಾನುಭವಿಗಳಿಗೆ ಸವಲತ್ತು ಹಾಗೂ ಮೀನು ಕೃಷಿಕರಿಗೆ ಉಚಿತ ಮೀನು ಮರಿ ವಿತರಿಸಿದರು. ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾಶ್ರೀ ಶೆಣೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
30 ಫಲಾನುಭವಿಗಳಿಗೆ 15 ಸಾವಿರ ಮೀನು ಮರಿ ವಿತರಣೆ: ಮೀನುಗಾರಿಕಾ ಇಲಾಖೆಗೆ ಬೇಡಿಕೆ ಸಲ್ಲಿಸಿರುವ 30 ಮೀನು ಕೃಷಿಕರಿಗೆ 15 ಸಾವಿರ ಮೀನು ಮರಿ ವಿತರಿಸಲಾಯಿತು. ಕಾಟ್ಲಾ ಮತ್ತು ರೋಹೋ ಜಾತಿಯ 500 ಮೀನು ಮರಿಗಳನ್ನು 30 ಮಂದಿಗೆ ಉಚಿತವಾಗಿ ವಿತರಿಸಿದರು. ಪರಿಶಿಷ್ಟ ಜಾತಿಯ ಇಬ್ಬರು ಫಲಾನುಭವಿಗಳಿಗೆ ಮೀನುಗಾರಿಕೆಯ ಸಲಕರಣೆ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.