ADVERTISEMENT

ಸುರತ್ಕಲ್, ಉಳ್ಳಾಲದಲ್ಲಿ ಮೀನುಗಾರರಿಗೆ ಟಿಕೆಟ್ ನೀಡಿ– ರಾಮಚಂದರ್‌ ಬೈಕಂಪಾಡಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 13:44 IST
Last Updated 1 ಏಪ್ರಿಲ್ 2023, 13:44 IST
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸದಸ್ಯ ರಾಮಚಂದರ್‌ ಬೈಕಂಪಾಡಿ ಮಾತನಾಡಿದರು. ಬಾಬು ಬಂಗೇರ, ಮುರಳಿರಾಜ್ ಉಚ್ಚಿಲ, ಸುಕೇಶ್ ಜಿಕೆ ಉಚ್ಚಿಲ ಇದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸದಸ್ಯ ರಾಮಚಂದರ್‌ ಬೈಕಂಪಾಡಿ ಮಾತನಾಡಿದರು. ಬಾಬು ಬಂಗೇರ, ಮುರಳಿರಾಜ್ ಉಚ್ಚಿಲ, ಸುಕೇಶ್ ಜಿಕೆ ಉಚ್ಚಿಲ ಇದ್ದಾರೆ   

ಮಂಗಳೂರು: ನಗರ ವ್ಯಾಪ್ತಿಯ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಮಂಗಳೂರು (ಉಳ್ಳಾಲ) ಮತ್ತು ಮಂಗಳೂರು ಉತ್ತರ (ಸುರತ್ಕಲ್‌) ಕ್ಷೇತ್ರಗಳಲ್ಲಿ ಮೀನುಗಾರರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸದಸ್ಯ ರಾಮಚಂದರ್‌ ಬೈಕಂಪಾಡಿ ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮೀನುಗಾರ ಸಮುದಾಯದವರಿಗೆ ಯಾವ ರಾಜಕೀಯ ಪಕ್ಷದಿಂದಲೂ ಸ್ಥಾನ–ಮಾನ ಸಿಗಲಿಲ್ಲ. ಈ ಭಾಗದ ಮೀನುಗಾರರ ಪೈಕಿ ಶೇಕಡ 80ರಷ್ಟು ಮಂದಿ ಹಿಂದುತ್ವದ ಆಧಾರದಲ್ಲಿ ಇಷ್ಟು ವರ್ಷ ಬಿಜೆಪಿಗೆ ಮತ ಚಲಾಯಿಸುತ್ತಿದ್ದಾರೆ. ಆದರೂ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದ್ದು ಕಡಿಮೆ ಎಂದು ದೂರಿದರು.

ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಮೀನುಗಾರ ಸಮುದಾಯದವರ ಪ್ರಭಾವ ಇದ್ದು ಮಂಗಳೂರು ಉತ್ತರ, ಮೀನುಗಾರರ ಸಾಂಪ್ರದಾಯಿಕ ಕ್ಷೇತ್ರವಾಗಿದ್ದು ಮೀನುಗಾರರು ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದ್ದಾರೆ. ಆದರೂ ಶಾಸಕರಾಗಲು ಸಾಧ್ಯವಾಗಲಿಲ್ಲ. ಈ ಬಾರಿ ಕನಿಷ್ಠ ಎರಡು ಕ್ಷೇತ್ರಗಳಲ್ಲಿ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಮತ್ತು ರಾಜ್ಯ ಘಟಕದ ಅಧ್ಯಕ್ಷರನ್ನು ಕೋರಲಾಗಿದೆ ಎಂದು ಅವರು ಹೇಳಿದರು.

ADVERTISEMENT

ಮೀನುಗಾರರಿಗೆ ಟಿಕೆಟ್ ನೀಡದೇ ಇದ್ದರೆ ಚುನಾವಣೆಯ ಸಂದರ್ಭದಲ್ಲಿ ಮೀನುಗಾರರು ತಟಸ್ಥರಾಗಿರುವರು. ಈ ಬಗ್ಗೆ ರಾಜ್ಯದಾದ್ಯಂತ ಜಾಗೃತಿ ಮೂಡಿಸಲಾಗುವುದು ಎಂದ ರಾಮಚಂದರ್‌ ಬೈಕಂಪಾಡಿ, ಸುರತ್ಕಲ್ ಕ್ಷೇತ್ರದಲ್ಲಿ ಮೀನುಗಾರರ ಪರವಾಗಿ ಸ್ಪರ್ಧಿಸಲು ತಮಗಿಂತ ಅರ್ಹತೆ ಇರುವವರು ಯಾರೂ ಇಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ತಾವು ಟಿಕೆಟ್ ಆಕಾಂಕ್ಷಿ ಎಂದರು.

ಬಾಬು ಬಂಗೇರ, ಮುರಳಿರಾಜ್ ಉಚ್ಚಿಲ, ಸುಕೇಶ್ ಜಿಕೆ ಉಚ್ಚಿಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.