ADVERTISEMENT

ಮಂಗಳೂರು: ಫುಟ್ಬಾಲ್ ಟೂರ್ನಿ ಮಾ.3ರಿಂದ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 14:34 IST
Last Updated 29 ಫೆಬ್ರುವರಿ 2024, 14:34 IST

ಮಂಗಳೂರು: ಬೆಂಗರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಅಮೃತ ಮಹೋತ್ಸವದ ಪ್ರಯುಕ್ತ ಬೆಂಗರೆ ಸರೋಜಿನಿ ಪುಂಡಲೀಕ ಕರ್ಕೇರ ಸ್ಮರಣಾರ್ಥ ದಕ್ಷಿಣ ಭಾರತ ಮಟ್ಟದ ಫುಟ್ಬಾಲ್ ಟೂರ್ನಿಯು ಮಾರ್ಚ್‌ 3ರಿಂದ 10ರವರೆಗೆ ನಗರದ ಫುಟ್ಬಾಲ್ ಮೈದಾನದಲ್ಲಿ ನಡೆಯಲಿದೆ.

ಟೂರ್ನಿಯಲ್ಲಿ ಕೇರಳ, ತಮಿಳುನಾಡು, ಗೋವಾದ ಆಯ್ದ 16 ತಂಡಗಳು ಭಾಗವಹಿಸಲಿವೆ. ವಿಜೇತ ತಂಡಕ್ಕೆ ಪ್ರಥಮ ₹1 ಲಕ್ಷ, ದ್ವಿತೀಯ ₹50 ಸಾವಿರ ಬಹುಮಾನ ನಿಗದಿಪಡಿಸಲಾಗಿದೆ. ಸಂಘದ ಅಮೃತ ಮಹೋತ್ಸವದ ಅಂಗವಾಗಿ ₹1 ಕೋಟಿ ವೆಚ್ಚದ ಕಾರ್ಯಯೋಜನೆ ರೂಪಿಸಲಾಗಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ₹25 ಲಕ್ಷ, ಅಮೃತ ಮಹೋತ್ಸವ ಕಟ್ಟಡಕ್ಕೆ ₹25 ಲಕ್ಷ, ಊರಿನ ವಿವಿಧ ಸೌಲಭ್ಯಗಳಿಗೆ ₹20 ಲಕ್ಷ, ಕ್ರೀಡಾಕೂಟಗಳಿಗೆ ₹30 ಲಕ್ಷ ನಿಗದಿಪಡಿಸಲಾಗಿದೆ. 75 ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹಗ್ಗಜಗ್ಗಾಟ, ನದಿಯಲ್ಲಿ ಬಲೆ ಬೀಸುವುದು, ಲಗೋರಿ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಏಪ್ರಿಲ್ ಕೊನೆಯ ವಾರದಲ್ಲಿ ಸಮಾರೋಪ ನಡೆಯಲಿದೆ ಎಂದು ಅಮೃತ ಮಹೋತ್ಸವ ಸಮಿತಿ ಸಂಚಾಲಕ ವಿಜಯ ಸುವರ್ಣ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾ.3ರಂದು ಸಂಜೆ 4 ಗಂಟೆಗೆ ಮೇಯರ್ ಸುಧೀರ್ ಶೆಟ್ಟಿ ಟೂರ್ನಿಗೆ ಚಾಲನೆ ನೀಡುವರು. ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಅಸ್ಲಂ ಅಧ್ಯಕ್ಷತೆ ವಹಿಸುವರು. ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್ ಕುಲಾಲ್ ಮತ್ತಿತರರು ಭಾಗವಹಿಸುವರು ಎಂದು ಹೇಳಿದರು.

ADVERTISEMENT

ಯುವಕ ಮಂಡಲದ ಅಧ್ಯಕ್ಷ ಸಂಜಯ್ ಸುವರ್ಣ, ಉಪಾಧ್ಯಕ್ಷ ಪುಂಡಲೀಕ ಮೈಂದನ್, ಪ್ರಮುಖರಾದ ಹರೀಶ್ ಕಾಂಚನ್, ಸಪ್ನಾ ಅನಿಲ್, ಭಾಸ್ಕರ ಬೆಂಗ್ರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.