ADVERTISEMENT

ದ.ಕ: ಕಡಲಾಮೆ ಸಂತಾನೋತ್ಪತ್ತಿ ತಾಣ 12 ಕಡೆ ಪತ್ತೆ

ಅಪಾಯದ ಅಂಚಿನಲ್ಲಿರುವ ಆಮೆಗಳ ಕಾಳಜಿ ವಹಿಸುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 20:02 IST
Last Updated 6 ಫೆಬ್ರುವರಿ 2024, 20:02 IST
ಮಂಗಳೂರಿನ ತಣ್ಣೀರುಬಾವಿ ಕಿನಾರೆಯಲ್ಲಿ ಕಡಲಾಮೆಗಳ ಸಂತಾನೋತ್ಪತ್ತಿ ತಾಣವನ್ನು ಸಚಿವ ಈಶ್ವರ ಬಿ.ಖಂಡ್ರೆ ಸೋಮವಾರ ರಾತ್ರಿ ವೀಕ್ಷಿಸಿದರು
ಮಂಗಳೂರಿನ ತಣ್ಣೀರುಬಾವಿ ಕಿನಾರೆಯಲ್ಲಿ ಕಡಲಾಮೆಗಳ ಸಂತಾನೋತ್ಪತ್ತಿ ತಾಣವನ್ನು ಸಚಿವ ಈಶ್ವರ ಬಿ.ಖಂಡ್ರೆ ಸೋಮವಾರ ರಾತ್ರಿ ವೀಕ್ಷಿಸಿದರು   

ಮಂಗಳೂರು: ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿ 1ರಡಿ ರಕ್ಷಣೆ ಪಡೆದಿರುವ ಕಡಲಾಮೆಗಳ ಸಂತಾನೋತ್ಪತ್ತಿ ಚಟುವಟಿಕೆ ದಕ್ಷಿಣ ಕನ್ನಡ ಜಿಲ್ಲೆಯ ಕಡಲ ಕಿನಾರೆಯಲ್ಲಿ 1985ರ ಬಳಿಕ ಇದೇ ಮೊದಲ ಸಲ ಕಂಡುಬಂದಿದೆ. ಜಿಲ್ಲೆಯ 12 ಕಡೆ ಈ ಆಮೆಗಳು ಮೊಟ್ಟೆ ಇಡುವ ಜಾಗಗಳನ್ನು ಅರಣ್ಯ ಇಲಾಖೆ ಪತ್ತೆಹಚ್ಚಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ತಣ್ಣೀರುಬಾವಿ ಬಳಿ ಕಡಲಾಮೆ (ಆಲಿವ್‌ ರಿಡ್ಲೆ) ಆಮೆಗಳ ಸಂತಾನೋತ್ಪತ್ತಿ ತಾಣಕ್ಕೆ ಭೇಟಿ ನೀಡಿ ಅವರು ಪರಿಶೀಲಿಸಿದರು.

‘ಕಡಲಾಮೆಗಳ ಸಂರಕ್ಷಣೆಗೆ ಕ್ರಮವಹಿಸಬೇಕು. ಮೊಟ್ಟೆಯೊಡೆದು ಹೊರಬರುವ ಆಮೆ ಮರಿಗಳು ಸುರಕ್ಷಿತವಾಗಿ ಕಡಲ ಒಡಲನ್ನು ಸೇರುವಾಗ ಅಡ್ಡಿ ಆತಂಕ ಎದುರಾಗದಂತೆ ವ್ಯವಸ್ಥೆ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ADVERTISEMENT

ಕಡಲಾಮೆಗಳ ಸಂತಾನೋತ್ಪತ್ತಿ ತಾಣಗಳ ಪತ್ತೆ ಹಾಗೂ ಸಂರಕ್ಷಣಾ ಕಾರ್ಯಕ್ಕೆ ನೆರವಾದ ಮೀನುಗಾರರಾದ ಆನಂದ ಕೋಟ್ಯಾನ್‌ ಮತ್ತು ವಾಸು ಕೊಟ್ಯಾನ್‌ ಅವರಿಗೆ ಸಚಿವರು ತಲಾ ₹ 5 ಸಾವಿರ ಬಹುಮಾನ ವಿತರಿಸಿದರು. 

‘ಅರಣ್ಯ ಇಲಾಖೆಯು ಸಸಿಹಿತ್ಲು, ಇಡ್ಯಾ, ಬೆಂಗರೆ, ತಣ್ಣೀರುಬಾವಿ ಹಾಗೂ ಸೋಮೇಶ್ವರದಲ್ಲಿ ಕಡಲಾಮೆಗಳ ಪತ್ತೆ ಹಾಗೂ ಅವುಗಳ ಚಟುವಟಿಕೆ ದಾಖಲೀಕರಣಕ್ಕೆ ಕಿನಾರೆಗಳಲ್ಲಿ ಶಿಬಿರಗಳನ್ನು ಆರಂಭಿಸಿದೆ. ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ರಕ್ಷಕರ ಮಾರ್ಗದರ್ಶನದಲ್ಲಿ ಮೂರು ಅಥವಾ ನಾಲ್ವರು ವೀಕ್ಷಕರು ಕಡಲಾಮೆಗಳು ಕಿನಾರೆಗೆ ಬಂದು ಗೂಡು ಕಟ್ಟಿ ಸಂತಾನೋತ್ಪಾದನೆ ಮಾಡುವ ಪ್ರಕ್ರಿಯೆಯನ್ನು ಮುಸ್ಸಂಜೆಯಿಂದ ಮುಂಜಾನೆವರೆಗೆ ಪರಿವೀಕ್ಷಿಸಿ ದಾಖಲೀಕರಿಸುತ್ತಿದ್ದಾರೆ’.

‘ಕಡಲಾಮೆಗಳು ಮೊಟ್ಟೆ ಇಟ್ಟ ಜಾಗದಲ್ಲೇ ಅವುಗಳಿಗೆ ರಕ್ಷಣೆ ಒದಗಿಸಲು ಹಾಗೂ ಬೇಟೆಯಾಡುವ ಪ್ರಾಣಿ ಅಥವಾ ಪಕ್ಷಿಗಳಿಗೆ ಅವು ಬಲಿಯಾಗುವುದನ್ನು ತಡೆಗಟ್ಟಲು ಕ್ರಮಕೈಗೊಂಡಿದ್ದೇವೆ. ಸೋಮೇಶ್ವರದಿಂದ ಸಸಿಹಿತ್ಲುವಿನ ವರೆಗಿನ ಕಿನಾರೆಯಲ್ಲಿ ಕಡಲಾಮೆಗಳ ರಕ್ಷಣೆಯ ಅಗತ್ಯದ ಕುರಿತು ಮೀನುಗಾರ ಸಮುದಾಯಗಳಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ತಣ್ಣೀರುಬಾವಿ ಕಿನಾರೆಯಲ್ಲಿ ಪತ್ತೆಯಾದ ಕಡಲಾಮೆ ಮೊಟ್ಟೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.