ಬೆಳ್ತಂಗಡಿ: ‘ತಾಲ್ಲೂಕಿನ ಗುರುವಾಯನಕೆರೆಯಿಂದ ಉಜಿರೆಯವರೆಗೆ ದ್ವಿಪಥ ರಸ್ತೆಯೇ ಸೂಕ್ತ. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಚತುಷ್ಪಥ ರಸ್ತೆಗೆ ನಮ್ಮ ವಿರೋಧವಿದೆ’ ಎಂದು ತಿಳಿಸಿ, ಬೆಳ್ತಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪ್ರಮುಖರು ನಗರ ಪಂಚಾಯಿತಿಗೆ ಮನವಿ ನೀಡಿದರು.
‘ಚತುಷ್ಪಥ ನಿರ್ಮಾಣದ ಬಗ್ಗೆ ಪ್ರಸ್ತಾವವನ್ನು ಪತ್ರಿಕೆಗಳಲ್ಲಿ ನೋಡಿದ್ದೇವೆ. ಯಾವುದೇ ಅಧಿಕೃತ ಪ್ರಸ್ತಾವ ನಮ್ಮ ಗಮನಕ್ಕೆ ಬಂದಿಲ್ಲ. ಈಗಾಗಲೇ ವ್ಯಾಪಾರಿಗಳು ಕೋವಿಡ್ನಿಂದ ಸಾಕಷ್ಟು ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಚತುಷ್ಪಥ ನಿರ್ಮಾಣವಾದಲ್ಲಿ ಮತ್ತೆ ಬರೆ ಎಳೆದಂತೆ ಆಗುತ್ತದೆ. ನಾವು ಅಭಿವೃದ್ಧಿಯ ವಿರುದ್ಧವಲ್ಲ. ಈ ಪ್ರಸ್ತಾವದಿಂದ ವ್ಯಾಪಾರಿಗಳೊಂದಿಗೆ, ಕಟ್ಟಡ ಮಾಲೀಕರಿಗೂ ನಷ್ಟ ಆಗುತ್ತದೆ. ಈಗ ಇರುವ ವಾಹನ ದಟ್ಟಣೆಗೆ (ಮುಂದಿನ 10 ವರ್ಷಗಳವರೆಗೆ) ದ್ವಿಪಥ ಸಾಕು. ಚತುಷ್ಪಥ ಅಗತ್ಯ ಇರುವಷ್ಟು ವಾಹನ ಸಂಚಾರ ಈ ರಸ್ತೆಯಲ್ಲಿ ಇಲ್ಲ. ಹೀಗಾಗಿ ಚತುಷ್ಪಥ ರಸ್ತೆ ಮಾಡುವ ಪ್ರಸ್ತಾವ ಇದ್ದಲ್ಲಿ ಇದಕ್ಕೆ ನಮ್ಮ ಸಮ್ಮತಿ ಇಲ್ಲ. ಚತುಷ್ಪಥ ಪ್ರಸ್ತಾವವನ್ನು ನಾವು ವಿರೋಧಿಸುತ್ತೇವೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನಗರ ಪಂಚಾಯಿತಿ ಉಪಾಧ್ಯಕ್ಷ ಜಯಾನಂದ ಗೌಡ ಮನವಿ ಸ್ವೀಕರಿಸಿದರು. ಬೆಳ್ತಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಕಾರ್ಯದರ್ಶಿ ರೋನಾಲ್ಡ್ ಲೋಬೊ, ಕೋಶಾಧಿಕಾರಿ ಸುನಿಲ್ ಶೆಣೈ, ಸದಸ್ಯರಾದ ರಾಜೇಶ್ ಶೆಟ್ಟಿ, ಶಶಿಧರ್ ಪೈ, ಡಿ. ಜಗದೀಶ್, ಯಶವಂತ ಪಟವರ್ಧನ್, ಉಮರ್ ಫಾರೂಕ್, ಶೀತಲ್ ಜೈನ್, ಜೂಡ್ ಗೋಡ್ವಿನ್ ಲೋಬೊ, ಭಾನು ಪ್ರಸನ್ನ, ಚಿದಾನಂದ ಇಡ್ಯಾ, ಲ್ಯಾನ್ಸಿ ಪಿರೇರಾ, ಯೇಸುದಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.