ಕಾಸರಗೋಡು: ಇಲ್ಲಿನ ವಿದ್ಯಾನಗರದ ನಗರಸಭೆ ಕ್ರೀಡಾಂಗಣ ರಸ್ತೆ ಈಗ ವೀಕ್ಷಕ ವಿವರಣೆಕಾರ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರ ಹೆಸರಿನಲ್ಲಿ ಪ್ರಸಿದ್ಧಿ ಗಳಿಸಿದೆ.
ಶುಕ್ರವಾರ ಸಂಜೆ ನಡೆದ ಸಂಭ್ರಮದ ಸಮಾರಂಭದಲ್ಲಿ ತಮ್ಮ ಹೆಸರಿನ ರಸ್ತೆಯನ್ನು ಗಾವಸ್ಕರ್ ಉದ್ಘಾಟಿಸಿದರು. ನಂತರ ಚೆಟ್ಟಂಗುಳಿ ರಾಯಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪೌರಸನ್ಮಾನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಾನು ಜನಿಸಿ ಬೆಳೆದ ಮುಂಬಯಿಯಲ್ಲಿ ಕೂಡ ರಸ್ತೆಗೆ ನನ್ನ ಹೆಸರು ಇರಿಸಲಿಲ್ಲ. ಕಾಸರಗೋಡಿನ ರಸ್ತೆಯೊಂದು ಕ್ರೀಡಾಪಟುವಿನ ಹೆಸರಿನಲ್ಲಿ ಗುರುತಿಸಿಕೊಂಡು ಗಮನ ಸೆಳೆದಿದೆ’ ಎಂದರು.
‘ಉತ್ತಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ನಾಡು ಕೇರಳ. ಹೀಗಾಗಿ ಈ ರಾಜ್ಯದ ಕುರಿತು ನನಗೆ ಅಪಾರ ಗೌರವವಿದೆ ’ ಎಂದು ಅವರು ಹೇಳಿದರು.
ಮಾದಕ ಪದಾರ್ಥ ಮುಕ್ತ ರಾಜ್ಯಕ್ಕಾಗಿ ಕೇರಳ ಪೊಲೀಸರು ನಡೆಸುತ್ತಿರುವ ಅಭಿಯಾನದ ಲಾಂಛನವನ್ನು ಗಾವಸ್ಕರ್ ಬಿಡುಗಡೆ ಮಾಡಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಸೈದ್ ಅಬ್ದುಲ್ ಖಾದರ್ ಅಭಿನಂದನಾ ನುಡಿಗಳನ್ನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಾಲಕೃಷ್ಣನ್ ನಾಯರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.