ADVERTISEMENT

ಬಂಟ್ವಾಳ: ತ್ಯಾಜ್ಯ ಘಟಕ ನಿರ್ಮಾಣ ವಿಳಂಬ

ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಜಂಟಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 6:00 IST
Last Updated 9 ಮಾರ್ಚ್ 2022, 6:00 IST
ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೈಲ ಎಂಬಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗಿರುವುದು.
ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೈಲ ಎಂಬಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗಿರುವುದು.   

ಬಂಟ್ವಾಳ: ಇಲ್ಲಿನ ಒಟ್ಟು 58 ಗ್ರಾಮ ಪಂಚಾಯಿತಿಗಳ ಪೈಕಿ 23 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಗೊಂಡಿದ್ದು, 33 ಗ್ರಾಮ ಪಂಚಾಯಿತಿಗಳಿಗೆ ಸರ್ಕಾರಿ ಜಮೀನು ಮಂಜೂರಾಗಿದ್ದರೂ, ಘಟಕ ನಿರ್ಮಾಣ ಕಾರ್ಯ ಚುರುಕು ಪಡೆದಿಲ್ಲ.

ಸಜಿಪನಡು ಮತ್ತು ಸಜಿಪಮುನ್ನೂರು ಗ್ರಾಮ ಪಂಚಾಯಿತಿಗಳಲ್ಲಿ ತಲಾ ಒಂದು ಎಕರೆಯಂತೆ ಜಮೀನು ಮೀಸಲಿಟ್ಟರೂ ಕಂದಾಯ ಇಲಾಖೆ ಜಮೀನು ಸರ್ವೆ ಮತ್ತು ನಮೂನೆ 57 ವಿಚಾರಣೆಗೆ ಮೀನ-ಮೇಷ ಎಣಿಸುತ್ತಿರುವ ಆರೋಪ ಕೇಳಿಬಂದಿದೆ.

ಈಗಾಗಲೇ ಕಾಮಗಾರಿ ಪೂರ್ಣಗೊಳಿಸಿದ ಮಣಿನಾಲ್ಕೂರು ಗ್ರಾಮ ಪಂಚಾಯಿತಿ ಗರಿಷ್ಠ 2.64 ಎಕರೆ ಜಮೀನು ಮೀಸಲಿಟ್ಟಿದ್ದರೆ, ವಿಟ್ಲಪಡ್ನೂರು, ಇರಾ ಮತ್ತು ನರಿಂಗಾನ ತಲಾ ಎರಡು ಎಕರೆ ಮೀಸಲಿಟ್ಟಿವೆ. ಇಲ್ಲಿನ ಇರ್ವತ್ತೂರು 1.25 ಎಕರೆ, ತುಂಬೆ, ನಾವೂರು, ನೆಟ್ಲಮುಡ್ನೂರು, ಸರಪಾಡಿ, ಗೋಳ್ತಮಜಲು, ಕುರ್ನಾಡು, ಇಡ್ಕಿದು, ಕಡೇಶ್ವಾಲ್ಯ, ಬೋಳಂತೂರು, ಬಡಗಬೆಳ್ಳೂರು, ಕೊಳ್ನಾಡು ಗ್ರಾಮ ಪಂಚಾಯಿತಿಗಳಲ್ಲಿ ತಲಾ ಒಂದು ಎಕರೆ ಜಮೀನು ಮೀಸಲಿಡಲಾಗಿದೆ. ಆದರೆ, ಅನಂತಾಡಿ, ಪುಣಚ ಮತ್ತು ಕಾವಳಪಡೂರು ಗ್ರಾಮ ಪಂಚಾಯಿತಿಗಳಲ್ಲಿ ಕ್ರಮವಾಗಿ 2 ಸೆಂಟ್ಸ್, 5 ಸೆಂಟ್ಸ್ ಮತ್ತು 12 ಸೆಂಟ್ಸ್ ಮೀಸಲಿಟ್ಟರೆ ಉಳಿದಂತೆ ಬಹುತೇಕ ಎಲ್ಲ ಪಂಚಾಯಿತಿಗಳಲ್ಲಿ 25ರಿಂದ 75 ಸೆಂಟ್ಸ್‌ವರೆಗೆ ಜಮೀನು ಮೀಸಲಿಡಲಾಗಿದೆ.

ADVERTISEMENT

ಮಾಣಿ ಮತ್ತು ಪೆರಾಜೆ, ಸಂಗಬೆಟ್ಟು ಮತ್ತು ಕುಕ್ಕಿಪಾಡಿ ಜಂಟಿಯಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಪ್ರತ್ಯೇಕಗೊಳಿಸುವ ಅನಿವಾರ್ಯತೆ ಎದುರಾಗಿದೆ. ಈ ನಡುವೆ ಕಾಮಗಾರಿ ಪೂರ್ಣಗೊಂಡಿದೆ ಎಂದು ವರದಿ ಸಲ್ಲಿಸಿರುವ ಕೆಲವೊಂದು ಪಂಚಾಯಿತಿಗಳು ಇನ್ನೂ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂಬ ಆರೋಪವೂ ಸ್ಥಳೀಯರಿಂದ ಕೇಳಿ ಬಂದಿದೆ. ಪುರಸಭೆ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಯಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಇಲ್ಲಿನ ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ವಿವಾದ ಕಳೆದ 10 ವರ್ಷಗಳಿಂದಲೂ ಮುಂದುವರಿದಿದೆ.

ಸರ್ಕಾರದ ಆದೇಶದಂತೆ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಕಡ್ಡಾಯಗೊಳಿಸಿದ್ದು, ಈ ಬಗ್ಗೆ ಪಂಚಾಯಿತಿಗಳಿಗೂ ತಿಳಿಸಲಾಗಿದೆ. ರಾಜಣ್ಣ, ತಾ.ಪಂ. ಇ.ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.