ADVERTISEMENT

ಲಾರಿ– ಮಿನಿಲಾರಿ ಡಿಕ್ಕಿ– ಚಾಲಕರಿಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 7:04 IST
Last Updated 5 ಡಿಸೆಂಬರ್ 2022, 7:04 IST
ಕೈಕಂಬ– ಗುರುಪುರ ನಡುವೆ ಸಂಭವಿಸಿದ ಅಪಘಾತದಲ್ಲಿ ರಸ್ತೆ ಪಕ್ಕಕ್ಕೆ ಉರುಳಿಬಿದ್ದ ವಾಹನ
ಕೈಕಂಬ– ಗುರುಪುರ ನಡುವೆ ಸಂಭವಿಸಿದ ಅಪಘಾತದಲ್ಲಿ ರಸ್ತೆ ಪಕ್ಕಕ್ಕೆ ಉರುಳಿಬಿದ್ದ ವಾಹನ   

ಮಂಗಳೂರು: ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುರುಪುರ– ಕೈಕಂಬ ನಡುವೆ ಲಾರಿ ಹಾಗೂ ಮಿನಿಲಾರಿ (ಐಷರ್‌) ನಡುವೆ ಸೋಮವಾರ ಬೆಳಿಗ್ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಎರಡೂ ವಾಹನಗಳ ಚಾಲಕರು ಮೃತಪಟ್ಟಿದ್ದಾರೆ.

ಮೃತ ಚಾಲಕರ ಹೆಸರು, ವಿಳಾಸ ತಿಳಿದುಬಂದಿಲ್ಲ.

ಆಂಧ್ರ ಪ್ರದೇಶದ ಲಾರಿ ಮಂಗಳೂರು ಕಡೆಯಿಂದ ಮಣ್ಣನ್ನು ಹೇರಿಕೊಂಡು ಕೈಕಂಬ ಕಡೆಗೆ ಹೋಗುತ್ತಿತ್ತು. ಕೈಕಂಬದಿಂದಮಂಗಳೂರಿನ ಕಡೆಗೆ ಹೋಗುತ್ತಿದ್ದ ಮಿನಿಲಾರಿಯಲ್ಲಿ ಯಾವುದೇ ಸರಕು ಇರಲಿಲ್ಲ. ಕೈಕಂಬ ಮತ್ತು ಗುರುಪುರ ನಡುವಿ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾಗಿದ್ದವು. ಢಿಕ್ಕಿಯ ರಭಸಕ್ಕೆ ಐಷರ್‌ ವಾಹನವು ರಸ್ತೆ ಪಕ್ಕ ಉರುಳಿ ಬಿದ್ದಿದೆ.

ADVERTISEMENT

ಇಲ್ಲಿ ಕಿರಿದಾದ ರಸ್ತೆ ಇದ್ದು, ಅಪಘಾತದ ಬಳಿಕ ಸಂಚಾರ ದಟ್ಟಣೆ ಉಂಟಾಗಿತ್ತು. ಬಜಪೆ ಠಾಣೆಯ ಎಸ್‌ಐ ಪ್ರಕಾಶ್‌ ಹಲಸಿನ ಕಟ್ಟೆ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಸಂಚಾರಕ್ಕೆ ಅಡ್ಡಿ ಉಂಟಾಗದಂತೆ ವ್ಯವಸ್ಥೆ ಕಲ್ಪಿಸಿತು. ಕ್ರೇನ್‌ ತರಿಸಿ ವಾಹನಗಳನ್ನು ಪಕ್ಕಕ್ಕೆ ಸರಿಸಲು ಕ್ರಮ ಕೈಗೊಂಡಿತು.

‘ಎರಡು ವಾಹನಗಳ್ಲಲಿ ಚಾಲಕ ಹಾಗೂ ಕ್ಲೀನರ್‌ ಇದ್ದರು. ಕ್ಲೀನರ್‌ಗಳು ಗಾಯಗೊಂಡಿದ್ದಾರೆ. ಚಾಲಕರ ಹೆಸರ ವಿಳಾಸ ಗೊತ್ತಾಗಿಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.