ಮೂಲ್ಕಿ: ಬಹುವರ್ಷಗಳ ಬೇಡಿಕೆಯಾಗಿರುವ ಹಳೆಯಂಗಡಿ ರೈಲ್ವೆ ಗೇಟ್ ಸಮೀಪ ಮೇಲ್ಸೇತುವೆ ನಿರ್ಮಿಸಲು ಕೊಂಕಣ ರೈಲ್ವೆ ಇಲಾಖೆಯ ಎಂಜಿನಿಯರಿಂಗ್ ವಿಭಾಗವು ₹16ಕೋಟಿ ವೆಚ್ಚದ ನೀಲನಕ್ಷೆಯನ್ನು ತಯಾರಿಸಿದೆ. ಇದನ್ನು ಅನುಷ್ಠಾನ ಗೊಳಿಸಲು ಸಂಸದ ನಳಿನ್ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಅನುಮೋದನೆಗೆ ಬೇಕಾದ ತಾಂತ್ರಿಕ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಹಳೆಯಂಗಡಿಯ ರೈಲ್ವೆ ಗೇಟ್ ಸಮೀಪ ಮೇಲ್ಸೇತುವೆ ಯೋಜನೆಯ ಬಗ್ಗೆ ಶುಕ್ರವಾರ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರೊಂದಿಗೆ ಪರಿಶೀಲಿಸಿದ ಬಳಿಕ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಕೊಂಕಣ ರೈಲ್ವೆ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಹಾಗೂ ಕಾರವಾರದ ಪ್ರಾದೇಶಿಕ ಎಂಜಿನಿಯರ್ ಆರ್.ಐ. ಪಾಟಿಲ್ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ಎಷ್ಟು ಜಮೀನು ಯೋಜನೆಗೆ ಬಳಕೆಯಾಗಲಿದೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸುವಂತೆ ಮೂಲ್ಕಿ ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅರಾಂದ್ ಬಳಿಯ ನಂದಿನಿ ನದಿ ತಟದಲ್ಲಿ ಸುರಕ್ಷತೆಯ ಬಗ್ಗೆ ಹಾಗೂ ನದಿ ದಡದಲ್ಲಿ ಮನೆ ನಿರ್ಮಿಸಿಕೊಂಡಿರುವ ನಿವಾಸಿಗಳ ದಾಖಲೆ ಪತ್ರದ ಬಗ್ಗೆ ಮಾಹಿತಿ ಪಡೆದರು. ಹಳೆಯಂಗಡಿಯ ಮುಖ್ಯ ಜಂಕ್ಷನ್ನಿಂದ ಪಕ್ಷಿಕರೆ ರಸ್ತೆಯಲ್ಲಿನ ಕಾಮಗಾರಿ ಪ್ರಗತಿ ಹಾಗೂ ಚರಂಡಿ ಸಮಸ್ಯೆಯನ್ನು ಪರಿಶೀಲಿಸಿದರು.
ವಿನೋದ್ಕುಮಾರ್ ಬೊಳ್ಳೂರು, ಜೀವನ್ ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷ ಅಶೋಕ್ ಬಂಗೇರ, ಸದಸ್ಯರಾದ ಚಂದ್ರಿಕಾ ಪ್ರವೀಣ್, ಸವಿತಾ ಸಾಲ್ಯಾನ್, ವಿನೋದ್ಕುಮಾರ್, ನಾಗರಾಜ್ ಪೂಜಾರಿ, ಅಶ್ವಿನ್ ದೇವಾಡಿಗ, ಪಿಡಿಒ ರಮೇಶ್ ನಾಯ್ಕ್, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷ ಶೈಲೇಶ್ಕುಮಾರ್, ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್, ಉಪಾಧ್ಯಕ್ಷ ಶ್ಯಾಂ ಪ್ರಸಾದ್, ನಿರ್ದೇಶಕ ಯೋಗೀಶ್ ಪಾವಂಜೆ, ಕೊಂಕಣ ರೈಲ್ವೆಯ ಸಹಾಯಕ ಎಂಜಿನಿಯರ್ ಸುಬೋಧಕುಮಾರ್, ಸಹಾಯಕ ಸಂಚಾರಿ ಅಧಿಕಾರಿ ದರ್ಶನ್ ಠಾಕೂರ್, ತಹಶೀಲ್ದಾರ್ ಕಮಲಮ್ಮ, ದಿನೇಶ್, ಗ್ರಾಮ ಕರಣಿಕ ಮೋಹನ್, ಎಂಜಿನಿಯರ್ ಗೋಪಾಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.