ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಇಲ್ಲಿನ ಪರಿಸರದಲ್ಲಿ ಭಾನುವಾರ ಬೆಳಿಗ್ಗೆ ಭಾರಿ ಗಾಳಿ–ಮಳೆ ಸುರಿದಿದೆ.
ಸುಬ್ರಹ್ಮಣ್ಯದ ದೇವರಗದ್ದೆಯ ಅಜ್ಜಿಹಿತ್ಲು ಎಂಬಲ್ಲಿ ಸೇತುವೆ ಅಂಚಿಗೆ ಮರ ಉರುಳಿ ದೇವರಗದ್ದೆ– ಸುಬ್ರಹ್ಮಣ್ಯ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಯಿತು. ನಾಲ್ಕೂರು ಗ್ರಾಮದ ಅಮೈಮನೆ ಸುಧೀರ್ ಎಂಬುವರ ಮನೆಗೆ ಶನಿವಾರ ತಡರಾತ್ರಿ ಮರಬಿದ್ದು ಚಾವಣಿ ಹಾನಿಯಾಗಿದೆ. ಮನೆಯಲ್ಲಿದ್ದ ಸುಧೀರ್ ಅವರ ಸಹೋದರ ಕುಶಾಲಪ್ಪ ಅವರ ಹಣೆಗೆ ಗಾಯವಾಗಿದೆ.
ಬಾಳಿಲ ಗ್ರಾಮದ ಬೊಮ್ಮನಮಜಲು ಎಂಬಲ್ಲಿ ರಸ್ತೆಗೆ ಮರ ಬಿದ್ದು ಬಾಳಿಲ, ಕಾಂಚೋಡು, ಕೋಟೆಮುಂಡುಗಾರು ರಸ್ತೆ ಬಂದ್ ಆಯಿತು. 7 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಗುತ್ತಿಗಾರಿನಲ್ಲೂ ಮನೆಯ ಸಮೀಪ ಮರ ಉರುಳಿ ಆವರಣಗೋಡೆ ಕುಸಿದಿದೆ.
ಸುಬ್ರಹ್ಮಣ್ಯ, ಬಾಳಿಲ, ಹರಿಹರಪಲ್ಲತ್ತಡ್ಕ, ಕೊಲ್ಲಮೊಗ್ರು, ಗುತ್ತಿಗಾರು, ನಡುಗಲ್ಲು, ಕಮಿಲ, ಮೊಗ್ರ, ಬಳ್ಪ, ಬೀದಿಗುಡ್ಡೆ, ಕೇನ್ಯ, ಪಂಜ, ಯೇನೆಕಲ್ಲು, ಪಂಜದಲ್ಲಿ ಕೃಷಿಗೆ ಹಾನಿಯಾಗಿದೆ.
ಮೆಸ್ಕಾಂನ ಸುಬ್ರಹ್ಮಣ್ಯ ಉಪವಿಭಾಗದಲ್ಲಿ ಸುಮಾರು 17 ವಿದ್ಯುತ್ ಕಂಬಗಳು ಮತ್ತು ಒಂದು ಟ್ರಾನ್ಸ್ಫಾರ್ಮರ್ಗೆ ಹಾನಿಯಾಗಿದೆ.
ಭಾನುವಾರ ಮಳೆಯ ತೀವ್ರತೆ ಕಡಿಮೆಯಾದ ಕಾರಣ ಕುಮಾರಧಾರದಲ್ಲಿನ ಪ್ರವಾಹ ಕಡಿಮೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.