ADVERTISEMENT

ಕುಸಿದ ಗುಡ್ಡ, ಮನೆಗಳಿಗೆ ನುಗ್ಗಿದ ನೀರು; ಮಂಗಳೂರು ನಗರದಲ್ಲಿ ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 7:01 IST
Last Updated 30 ಜೂನ್ 2022, 7:01 IST
ಪಡೀಲಿನಲ್ಲಿ ಮುಖ್ಯ ರಸ್ತೆ ನದಿಯಂತಾಗಿರುವುದು.
ಪಡೀಲಿನಲ್ಲಿ ಮುಖ್ಯ ರಸ್ತೆ ನದಿಯಂತಾಗಿರುವುದು.   

ಮಂಗಳೂರು: ಬುಧವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ಬೆಳಿಗ್ಗೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಮಂಗಳೂರು‌ ನಗರದ ವಿವಿಧ ಕಡೆಗಳಲ್ಲಿ ‌ರಸ್ತೆಯಲ್ಲಿ ನೀರು ನಿಂತ ಕಾರಣ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಶಾಲೆ-ಕಾಲೇಜು ವಿದ್ಯಾರ್ಥಿಗಳು‌ ಮತ್ತು ಕಚೇರಿಗಳಿಗೆ ತೆರಳುವ ನೌಕರರು ರಸ್ತೆಯಲ್ಲೇ ತಾಸುಗಟ್ಟಲೆ ಉಳಿಯಬೇಕಾಯಿತು.

ಕೊಟ್ಟಾರ ಚೌಕಿ, ಪಡೀಲ್ ರೈಲ್ವೆ ಸೇತುವೆ, ಕುಂಟಿಕಾನ‌ ಮುಂತಾದ ಕಡೆಗಳಲ್ಲಿ ನೀರು ನಿಂತ ಕಾರಣ ಬೆಂಗಳೂರು ರಸ್ತೆ, ಉಡುಪಿ ರಸ್ತೆ ಮತ್ತು ವಿಮಾನ ನಿಲ್ದಾಣ ರಸ್ತೆಗಳಲ್ಲಿ ಕಿಲೋಮೀಟರ್ ಗಳ ವರೆಗೆ ವಾಹನಗಳು ಸಾಲುಗಟ್ಟಿ ನಿಂತವು. ಕದ್ರಿ‌ ಮತ್ತು ಪಾಂಡೇಶ್ವರ ಅಗ್ನಿಶಾಮಕ ದಳದವರು ನೀರು ಪಂಪ್ ಮಾಡಿ ಆಚೆ ಹಾಕಿದರು.

ADVERTISEMENT

ಪಡೀಲಿನಲ್ಲಿ ಬೆಳಿಗ್ಗೆ 10 ಗಂಟೆಯ ವೇಳೆ ಒಂದು ಭಾಗದಲ್ಲಿ ವಾಹನ ಸಂಚಾರ ಸುಗಮವಾಯಿತು.‌ ಮತ್ತೊಂದು ಭಾಗದಲ್ಲಿ ವಾಹನಗಳ ಸಾಲು ಉಳಿಯಿತು. ನಗರದ ತಗ್ಗು‌ ಪ್ರದೇಶಗಳು ಜಲಾವೃತವಾದ ಕಾರಣ ಕೆಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ಉಡುಪಿ ರಸ್ತೆಯ ಮುಕ್ಕ ಜಂಕ್ಷನಿನಲ್ಲಿ‌ ಮನೆಗೆ ನುಗ್ಗಿದ ನೀರನ್ನು ಅಗ್ನಿಶಾಮಕದಳದವರು ಹೊರಹಾಕಿದರು. ನಂತೂರು ವೃತ್ತದಲ್ಲಿ ಮರ ಬಿದ್ದು ಕೆಲಕಾಲ ಸಂಚಾರಕ್ಕೆ ಅಡ್ಡಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.