ADVERTISEMENT

ಹಿಜಾಬ್– ಸಾಮರಸ್ಯ ಕಾಯುವಂಥ ತೀರ್ಮಾನ: ಯು.ಟಿ. ಖಾದರ್‌

​ಪ್ರಜಾವಾಣಿ ವಾರ್ತೆ
Published 17 ಮೇ 2023, 4:21 IST
Last Updated 17 ಮೇ 2023, 4:21 IST
ಯು.ಟಿ.ಖಾದರ್ 
ಯು.ಟಿ.ಖಾದರ್    

ಮಂಗಳೂರು: ‘ಶಾಲಾ- ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧದ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯಾಲಯದ ತೀರ್ಪು ಆಧರಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಾಮರಸ್ಯ ಕಾಪಾಡುವಂತಹ ನಿರ್ಧಾರವನ್ನು ಹೊಸ ಸರ್ಕಾರ ತೆಗೆದುಕೊಳ್ಳಲಿದೆ’ ಎಂದು ಶಾಸಕ ಯು.ಟಿ.ಖಾದರ್‌ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮುಸ್ಲೀಮರ ಶೇ 4ರಷ್ಟು ಮೀಸಲಾತಿ ರದ್ದತಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ವಿಚಾರದಲ್ಲಿ ಹಿಂದಿನ ಸರ್ಕಾರ ದುರುದ್ದೇಶಪೂರಿತ ಹಾಗೂ ರಾಜಕೀಯ ಪ್ರೇರಿತ ನಿರ್ಧಾರ ತೆಗೆದುಕೊಂಡಿದೆ. ಅವರಂತೆ ಒಂದು ಸಮುದಾಯದವರಿಗೆ ಕಣ್ಣೀರು ತರಿಸುವಂತಹ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಳ್ಳುವುದಿಲ್ಲ’ ಎಂದರು.

‘ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿಯನ್ನೇ ಪಡೆಯದೇ ಒಳಮೀಸಲಾತಿ ಕುರಿತು ಸರ್ಕಾರ ಆದೇಶ ಹೊರಡಿಸಿತ್ತು. ಅದನ್ನು ಜಾರಿಗೊಳಿಸುವುದಿಲ್ಲ ಎಂದು ನಂತರ ನ್ಯಾಯಾಲಯದಲ್ಲಿ ಪ್ರಮಾಣಪತ್ರ ಸಲ್ಲಿಸಿತ್ತು.  ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತಾರದೆಯೇ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸುವ ಕುರಿತು ಆದೇಶ ಪ್ರಕಟಿಸಿತ್ತು. ಅದು ಒಂದು ಸರ್ಕಾರವೇ’ ಎಂದು ಅವರು ಪ್ರಶ್ನಿಸಿದರು.  

ADVERTISEMENT

‘ಕೇಂದ್ರ ಸರ್ಕಾರದ ಯೋಜನೆಗಳು ರಾಜ್ಯಕ್ಕೆ ನೀಡುವ ಭಿಕ್ಷೆ ಅಲ್ಲ. ಜನರ ತೆರಿಗೆಯ ಪಾಲು ಅದು. ಕರ್ನಾಟಕದಿಂದ ಪ್ರತಿ ವರ್ಷ ₹ 1.5 ಲಕ್ಷ ಕೋಟಿಗೂ ಅಧಿಕ ತೆರಿಗೆ ಸಂಗ್ರಹಿಸುವ ಕೇಂದ್ರ ಸರ್ಕಾರ ಅದರಲ್ಲಿ ರಾಜ್ಯಕ್ಕೆ ಮರಳಿಸುತ್ತಿರುವುದು ₹42 ಸಾವಿರ ಕೋಟಿ ಮಾತ್ರ. ಆದರೂ ಬಿಜೆಪಿಯ 25‌ ಮಂದಿ ಸಂಸದರೂ ಈ ಬಗ್ಗೆ ಸೊಲ್ಲೆತ್ತುತ್ತಿಲ್ಲ. ರಾಜ್ಯಕ್ಕೆ ಕಾನೂನು ಬದ್ಧವಾಗಿ ಸಿಗಬೇಕಾದ ಪಾಲನ್ನು ನಾವು ಪಡೆದೇ ಪಡೆಯುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.