ADVERTISEMENT

ಬೆಳ್ತಂಗಡಿ| ಹಿಂದೂ ಸಂಗಮ ಪಂಚಾಯಿತಿ ಚುನಾವಣೆ ಪೂರ್ವಭಾವಿ ತಯಾರಿ: ಹರೀಶ್ ಕುಮಾರ್

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಿಂದ ಗ್ರಾಮ ಸಂಗ್ರಾಮ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 2:30 IST
Last Updated 3 ಫೆಬ್ರುವರಿ 2026, 2:30 IST
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಮಂಜುನಾಥ ಕಲಾಭವನದಲ್ಲಿ ನಡೆದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನದ 'ಗ್ರಾಮ ಸಂಗ್ರಾಮ' ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಹರೀಶ್ ಕುಮಾರ್ ಮಾತನಾಡಿದರು
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಮಂಜುನಾಥ ಕಲಾಭವನದಲ್ಲಿ ನಡೆದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನದ 'ಗ್ರಾಮ ಸಂಗ್ರಾಮ' ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಹರೀಶ್ ಕುಮಾರ್ ಮಾತನಾಡಿದರು   

ಬೆಳ್ತಂಗಡಿ: ‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ 20 ವರ್ಷಗಳ ಹಿಂದೆ ಆರಂಭವಾದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪವನ್ನು ಈಗಿನ ಕೇಂದ್ರ ಸರ್ಕಾರ ಬದಲಾಯಿಸಿರುವುದು ಖಂಡನೀಯ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಮಂಜುನಾಥ ಕಲಾಭವನದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನದ 'ಗ್ರಾಮ ಸಂಗ್ರಾಮ' ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಫೆ.9ರಿಂದ 12ರ ತನಕ ಜಿಲ್ಲೆಯ ಸುಳ್ಯದಿಂದ ಮೂಲ್ಕಿವರೆಗೆ ಕುಂಬ್ರ, ಮಾಣಿ, ಕಲ್ಲಡ್ಕ, ಪರಂಗಿಪೇಟೆ, ಮಂಗಳೂರು ಮೂಲಕ ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪ ಬದಲಾವಣೆ ವಿರುದ್ಧ ಪಾದಯಾತ್ರೆ ನಡೆಯಲಿದೆ. ಬಿಜೆಪಿ ನಡೆಸುತ್ತಿರುವ ಹಿಂದೂ ಸಂಗಮ ಕಾರ್ಯಕ್ರಮ ಪಂಚಾಯಿತಿ ಚುನಾವಣೆಗಳ ಪೂರ್ವಭಾವಿ ತಯಾರಿಯಾಗಿದೆ’ ಎಂದರು.

ADVERTISEMENT

ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾತನಾಡಿ, ‘ವಿಶ್ವದ ಅಗ್ರಗಣ್ಯ ನಾಯಕರ ಆದರ್ಶ ಪುರುಷ ಮಹಾತ್ಮ ಗಾಂಧೀಜಿ. ಗಾಂಧೀಜಿ ವಿಶ್ವಕ್ಕೆ ಸಂದೇಶ ಕೊಟ್ಟವರು ಈಗಿನ ಕೇಂದ್ರ ಸರ್ಕಾರಕ್ಕೆ ಗಾಂಧಿ ವಿಚಾರಗಳ ಜತೆ ಅವರ ಯೋಜನೆಗಳು ಬೇಕು. ಆದರೆ ಗಾಂಧೀಜಿ ಅವರ ಹೆಸರು ಬೇಡ. ಇದು ವಿಪರ್ಯಾಸ. ಗಾಂಧೀಜಿಯವರಿಗೆ ನಡೆಯುತ್ತಿರುವ ಅವಹೇಳನವನ್ನು ಕಾಂಗ್ರೆಸ್ ಸಹಿಸುವುದಿಲ್ಲ’ ಎಂದರು.

ಕೆಪಿಸಿಸಿಯ ವಕ್ತಾರ ಮುನೀರ್ ಜನ್ಸಾಲೆ ಮಾತನಾಡಿ, ‘ಗಾಂಧೀಜಿಯವರ ಹೆಸರು ಅಳಿಸಬೇಕು. ಬಡವರು ಮಧ್ಯಮ ವರ್ಗಕ್ಕೆ ಏರಬಾರದು. ಜನರ ಸಂಪಾದನೆ ಕಡಿಮೆಯಾಗಬೇಕು ಎಂಬ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪ ಬದಲಾಯಿಸಲಾಗಿದೆ. ಹಿಂದಿನ ಸರ್ಕಾರಗಳು ಜನರಿಗೆ ಭಯಪಡುತ್ತಿದ್ದರೆ ಇಂದಿನ ಸರ್ಕಾರಕ್ಕೆ ಜನರ ಭಯವಿಲ್ಲ. ಕೇಂದ್ರ ಸರ್ಕಾರ ಧರ್ಮರಕ್ಷಣೆ, ದೇಶ ರಕ್ಷಣೆಯ ಪ್ರಚಾರವನ್ನಷ್ಟೇ ಮಾಡುತ್ತಿದೆ’ ಎಂದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ‘ಉದ್ಯೋಗ ಖಾತ್ರಿ ಯೋಜನೆ, ಉದ್ಯೋಗದ ಹಕ್ಕು ನೀಡುವ ಕಾರ್ಯಕ್ರಮ ಇದನ್ನು ಜಾರಿಗೆ ತಂದಾಗ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕರು ಈಗ ಇದನ್ನು ದುರ್ಬಲಗೊಳಿಸುವ ಯತ್ನ ನಡೆಸುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಗೊಂಡ ಬಳಿಕ ಅದನ್ನು ವಿಶ್ವವೇ ಮೆಚ್ಚಿದೆ. ಇಂತಹ ಯೋಜನೆ ಮಾರ್ಪಾಡು ಮಾಡುವ ಪ್ರಯತ್ನ ಕೇಂದ್ರ ಸರ್ಕಾರದಿಂದ ನಡೆಯುತ್ತಿರುವುದು ಖೇದಕರ’ ಎಂದರು.

ತಾಲ್ಲೂಕು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ತಾಲ್ಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಜಿಲ್ಲಾ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಶೇಖರ ಕುಕ್ಕೆಡಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಸುರೇಶ ನಾವೂರು, ಪಕ್ಷದ ಜಿಲ್ಲಾ ವೀಕ್ಷಕಿ ಉಷಾ ಅಂಚನ್, ಕಿಸಾನ್ ಘಟಕದ ಜಿಲ್ಲಾ ಅಧ್ಯಕ್ಷ ಮೋಹನ್ ಗೌಡ, ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫೆರ್ನಾಂಡಿಸ್, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ನೇಮಿರಾಜ್, ಪಕ್ಷದ ಪ್ರಮುಖರು ಇದ್ದರು.

ಲಾಯಿಲ ಸಂಗಮ ಸಭಾಭವನದ ಬಳಿಯಿಂದ ಸಂತೆಕಟ್ಟೆ  ಮಂಜುನಾಥ ಸ್ವಾಮಿ ಸಭಾಭವನದವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ಶಾಹುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಾಶಿಪಟ್ಣ ಸ್ವಾಗತಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.