ADVERTISEMENT

ರಸ್ತೆಯಲ್ಲಿ ಇಫ್ತಾರ್ ಕೂಟ: ಚುನಾವಣಾಧಿಕಾರಿಗೆ ದೂರು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 5:38 IST
Last Updated 1 ಏಪ್ರಿಲ್ 2024, 5:38 IST

ಮುಡಿಪು (ದಕ್ಷಿಣ ಕನ್ನಡ): ‘ಆಟೊ ರಾಜಾಕನ್ಮಾರ್’ ಜಿಲ್ಲಾ ಆಟೊ ಚಾಲಕರ ಸಂಘಟನೆಯು ಮುಡಿಪುವಿನ ಜಂಕ್ಷನ್ ರಸ್ತೆಯಲ್ಲೇ ಇಫ್ತಾರ್ ಕೂಟ ಹಮ್ಮಿಕೊಂಡು ರಸ್ತೆ ತಡೆ ಮಾಡಿದ್ದು, ಇದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ’ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆಯು ಸಹಾಯಕ ಚುನಾವಣಾ ಅಧಿಕಾರಿಗೆ ದೂರು ನೀಡಿದೆ.

ಮುಡಿಪು ಜಂಕ್ಷನ್‌ನಲ್ಲಿ ಶುಕ್ರವಾರ ಸಂಜೆ ಆಟೊ ಚಾಲಕರ ಜಿಲ್ಲಾ ಸಂಘಟನೆಯು ರಸ್ತೆಯಲ್ಲೇ ಇಫ್ತಾರ್ ಕೂಟ ಆಯೋಜಿಸಿತ್ತು. ಇದರ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಈ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

‘ಈ ಇಫ್ತಾರ್ ಕೂಟದಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ’ ಎಂದು ಆರೋಪಿಸಿ ಮುಡಿಪು ವಲಯದ ಹಿಂದೂ ಜಾಗರಣ ವೇದಿಕೆಯು ಸಹಾಯಕ ಚುನಾವಣಾಧಿಕಾರಿ, ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ್ ಎಸ್.ಜೆ. ಅವರಿಗೆ ದೂರು ನೀಡಿದೆ.

ADVERTISEMENT

ಹಿಂದೂ ಜಾಗರಣ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹ ಮಾಣಿ, ಮಂಗಳೂರು ಸಂಪರ್ಕ ಪ್ರಮುಖ್ ಪ್ರಶಾಂತ್ ಶೆಟ್ಟಿ ಇರಾ, ತಾಲ್ಲೂಕು ಸಹ ಸಂಚಾಲಕ ಪ್ರಶಾಂತ್ ಮುಡಿಪು, ಮುಡಿಪು ವಲಯ ಸಹ ಸಂಚಾಲಕ ಗುರು ಕಿರಣ್, ಉಲ್ಲಾಸ್ ಮುಡಿಪು ದೂರು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.