
ಇಂಟರ್ನೆಟ್
ಮಂಗಳೂರು: ಸುರತ್ಕಲ್ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (ಎನ್ಐಟಿಕೆ) ಎಂಜಿನಿಯರ್ಗಳು ಭಾರಿ ಮಳೆಯಾಗುವ ಆಗುಂಬೆಯಾದ್ಯಂತ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
‘ಆಗುಂಬೆಯಲ್ಲಿ ಆರೋಗ್ಯವನ್ನು ಉತ್ತೇಜಿಸುವುದು’ ಎಂಬ ಶೀರ್ಷಿಕೆ ಅಡಿಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರೊ. ಮೋಹಿತ್ ಪಿ. ತಹಿಲಿಯಾನ್ ನೇತೃತ್ವದಲ್ಲಿ ಆಗುಂಬೆಯಲ್ಲಿ ಸುಮಾರು 100 ಇಂಟರ್ನೆಟ್ ಸಂಪರ್ಕ ಒದಗಿಸಲಾಗಿದೆ.
ಎಲ್ಲರಿಗೂ ಇಂಟರ್ನೆಟ್ ಕಾರ್ಯಕ್ರಮದ ಅಡಿಯಲ್ಲಿ ಐಇಇಇ ಕಮ್ಯುನಿಕೇಷನ್ ಸೊಸೈಟಿ ಮತ್ತು ಟಿ4ಜಿ ಒದಗಿಸಿದ ಧನಸಹಾಯದಲ್ಲಿ ಈ ಯೋಜನೆ ಕಾರ್ಯಗತಗೊಳಿಸಲಾಗಿದೆ. ಆಗಾಗ ವಿದ್ಯುತ್ ಅಡಚಣೆ, ಗುಡ್ಡಗಾಡು ಪ್ರದೇಶ ಇಂತಹ ಸವಾಲುಗಳ ನಡುವೆ ಆಗುಂಬೆಯ ಗ್ರಾಮ ಪಂಚಾಯಿತಿ ಕಚೇರಿ, ಆಸ್ಪತ್ರೆ, ಶಾಲೆ, ಪೊಲೀಸ್ ಠಾಣೆ, ಸಂಶೋಧನಾ ಕೇಂದ್ರ, ಹೋಂ ಸ್ಟೇ, ಮನೆಗಳು ಮೊದಲಾದ ಪ್ರದೇಶಗಳಿಗೆ ಇಂಟರ್ನೆಟ್ ಒದಗಿಸಲಾಗಿದೆ ಎಂದು ತಹಿಲಿಯಾನಿ ತಿಳಿಸಿದ್ದಾರೆ.
ಇನ್ನು ಈ ಪ್ರದೇಶದಲ್ಲಿ ಯುಪಿಐ ಪಾವತಿ, ಡಿಜಿಟಲ್ ವಹಿವಾಟು ನಡೆಸಲು ಈ ಸೌಲಭ್ಯ ಸಹಕಾರಿಯಾಗಲಿದೆ. ಮಕ್ಕಳು, ಶಿಕ್ಷಕರಿಗೆ ಆನ್ಲೈನ್ ಕಲಿಕೆಗೆ ಅನುಕೂಲವಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಆನ್ಲೈನ್ ಬುಕ್ಕಿಂಗ್ಗೂ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ದೀಪಾ ಕುಮಾರಿ, ಮತ್ತು ಐಇಇಇ ಮಂಗಳೂರು ಉಪವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿ ತಂಡದವರು ಈ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.