ಮಂಗಳೂರು: ‘ನನ್ನ ವಿಧಾನ ಪರಿಷತ್ ಸದಸ್ಯತ್ವದ ಅವಧಿ ಮಂಗಳವಾರ ಮುಕ್ತಾಯವಾಗಿದ್ದು, ಜನಸೇವೆಯ ತೃಪ್ತಿ ಇದೆ’ ಎಂದು ಐವನ್ ಡಿಸೋಜ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2014ರಿಂದ ಈವರೆಗೆ ಶಾಸನ ಸಭೆಯಲ್ಲಿ ಜನರ ಪರ ಧ್ವನಿ ಎತ್ತಿದ ತೃಪ್ತಿ ಇದೆ. ಮುಂದೆ ಜನಸೇವೆ, ಪಕ್ಷ ಸಂಘಟನೆ ಜೊತೆ ವಕೀಲ ವೃತ್ತಿಯನ್ನು ಮುಂದುವರಿಸುತ್ತೇನೆ’ ಎಂದರು.
‘ಸರ್ಕಾರದ ಮುಖ್ಯ ಸಚೇತಕನಾಗಿ, ಸಂಸದೀಯ ಕಾರ್ಯದರ್ಶಿ (ಕಂದಾಯ ಇಲಾಖೆ)ಯಾಗಿ ಸೇವೆ ಸಲ್ಲಿಸಿದ್ದೇನೆ. ಸೌರಶಕ್ತಿ ವಿದ್ಯುತ್ ಘಟಕ ಹೆಚ್ಚಳಕ್ಕೆ ಶ್ರಮ, ಶಾಸಕರ ನಿಧಿಯಿಂದ 25 ಶಾಲೆಗಳಿಗೆ 3 ಕಿ.ವಾಟ್ನ ಸೌರಶಕ್ತಿ ಘಟಕ, ಪೆರಾಬೆಯ ಎಂಡೋಪೀಡಿತರ ಮನೆಗಳಿಗೆ ಸೌರಶಕ್ತಿ ಸಂಪರ್ಕ, ವಿವಿಧ ನಿಗಮ, ಯೋಜನೆ, ಅಭಿವೃದ್ಧಿ ಕಾರ್ಯಗಳಡಿ ₹ 46 ಕೋಟಿ ಅನುದಾನ ಪಡೆಯಲಾಗಿದೆ’ ಎಂದರು.
‘1,600ಕ್ಕೂ ಹೆಚ್ಚು ಮಂದಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಡಿ ₹6.62 ಕೋಟಿ ಪರಿಹಾರ, 63 ಉಚಿತ ವೈದ್ಯಕೀಯ ಶಿಬಿರ, ಪತ್ನಿ ಡಾ. ಕವಿತಾ ಡಿಸೋಜ ಸಹಾಯದಿಂದ 350ಕ್ಕೂ ಅಧಿಕ ಉಚಿತ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. 3,500ಕ್ಕೂ ಅಧಿಕ ಜನರಿಗೆ ಉಚಿತ ಕನ್ನಡಕವನ್ನು ವಿತರಿಸಲಾಗಿದೆ. 68 ರಿಕ್ಷಾ ತಂಗುದಾಣಗಳ ನಿರ್ಮಾಣ, ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಶ್ರಮಿಸಿದ್ದೇನೆ’ ಎಂದರು.
ಶಾಸಕ ಯು.ಟಿ. ಖಾದರ್, ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ಮನುರಾಜ್, ನಾಗೇಂದ್ರ ಕುಮಾರ್, ನಝೀರ್ ಬಜಾಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.