ಮಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹಿಂದೂ ಧರ್ಮದ ಕುರಿತು ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಇಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಸತೀಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಮೋನಪ್ಪ ಭಂಡಾರಿ, ‘ಹಿಂದೂಗಳನ್ನು ಅವಹೇಳನ ಮಾಡುವುದು ಕಾಂಗ್ರೆಸ್ಗೆ ಹೊಸತೇನಲ್ಲ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮನಮೋಹನ್ ಸಿಂಗ್ ... ಎಲ್ಲರೂ ಮಾತನಾಡುವ ಶೈಲಿಯೇ ಹಾಗೆ. ಕಾಂಗ್ರೆಸ್ ನಾಯಕರೆಲ್ಲರೂ ಹಿಂದೂ ವಿರೋಧಿ ನೀತಿಯನ್ನೇ ಅಳವಡಿಸಿಕೊಂಡು ಬಂದವರು. ಆದರೂ ಕೆಲವು ಹಿಂದೂಗಳು ಈಗಲೂ ‘ಕಾಂಗ್ರೆಸ್ ನಮ್ಮದು’ ಎನ್ನುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಧೈರ್ಯವಿದ್ದರೆ ಕಾಂಗ್ರೆಸ್ ನಾಯಕರು ಇಸ್ಲಾಂನ ಅರ್ಥ ಏನು ಎಂಬುದನ್ನೂ ಇದೇ ರೀತಿ ಪ್ರಶ್ನಿಸಲಿ. ಕ್ರೈಸ್ತರ ಬಗ್ಗೆ, ಅವರ ಪಾದ್ರಿಗಳ ಬಗ್ಗೆ, ಮುಸ್ಲಿಂ ಧರ್ಮಗುರುಗಳ ಬಗ್ಗೆ ಮಾತನಾಡುವ ಧೈರ್ಯ ಅವರಿಗೆ ಇದೆಯೇ. ದೇಶದಲ್ಲಿ ಶೇ 80ರಷ್ಟು ಜನಸಂಖ್ಯೆಯನ್ನು ಹೊಂದಿರುವ ಹಿಂದೂಗಳ ಬಗ್ಗೆ ಪದೇ ಪದೇ ಅವಹೇಳನೆ ಏಕೆ’ ಎಂದು ಪ್ರಶ್ನಿಸಿದರು.
ಪಕ್ಷದ ಮುಖಂಡರಾದ ಶಕೀಲಾ ಕಾವ, ವಿಜಯಕುಮಾರ್ ಶೆಟ್ಟಿ, ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಪೂರ್ಣಿಮಾ ಹಾಗೂ ಇತರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.