ಮಂಗಳೂರು: ಶೆಫ್ ಟಾಕ್ ಸೀಸನ್ -2 ಕಬಡ್ಡಿ ಪ್ರೀಮಿಯರ್ ಲೀಗ್ ಆ.31, ಸೆಪ್ಟೆಂಬರ್ 1ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದ್ದು, ಎಂಟು ತಂಡಗಳು ಭಾಗವಹಿಸಲಿವೆ ಎಂದು ಕಾರ್ಯಕ್ರಮದ ಆಯೋಜಕ ಸುದೇಶ್ ಭಂಡಾರಿ ಮಂಗಳವಾರ ಇಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಕಳೆದ ವರ್ಷ ಸೀಸನ್–1 ಯಶಸ್ವಿಯಾಗಿ ನಡೆದಿದೆ. ಈ ಬಾರಿಯ ಪಂದ್ಯದಲ್ಲಿ ಅಸ್ರಾ ಬ್ರಿಗೇಡ್ಸ್, ಲೈಫ್ ಲೈನ್ಸ್ ಫಾಲ್ಕನ್ಸ್, ಟೀಮ್ ಬಾವ, ಯು ಕುಂಜತ್ತೂರು, ಮಂಗಳೂರು ಯುನೈಟೆಡ್ ಕಬಡ್ಡಿ ಕ್ಲಬ್, ಪ್ರಕಾಶ್ ಕುಂಪಲ ವಾರಿಯರ್ಸ್, ಕರ್ನಾಟಕ ತುಳುವಾಸ್ ನೈಜೀರಿಯಾ ಮತ್ತು ನ್ಯೂ ಸ್ಟಾರ್ ಮಂಗಳೂರು ತಂಡಗಳ ಆಟಗಾರರನ್ನು ಆಗಸ್ಟ್ 20ರಂದು ಹರಾಜಿನ ಮೂಲಕ ಆಯ್ಕೆ ಮಾಡಲಾಗಿದೆ. ಒಟ್ಟು 99 ಆಟಗಾರರು ಆಯ್ಕೆಯಾಗಿದ್ದಾರೆ’ ಎಂದರು.
ಗೌರವಾಧ್ಯಕ್ಷ ಪ್ರಕಾಶ್ ಕುಂಪಲ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಕಬಡ್ಡಿ ಟೂರ್ನಿ ಜೊತೆಗೆ ಈ ಬಾರಿ ಆಹಾರೋತ್ಸವ ಮತ್ತು ವಿನೋದ ಮೇಳವನ್ನು ಆಯೋಜಿಸಲಾಗಿದೆ. ಆ.30ರಂದು ಮೇಯರ್ ಸುಧೀರ್ ಶೆಟ್ಟಿ ಆಹಾರೋತ್ಸವ ಉದ್ಘಾಟಿಸುವರು. ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಸನ್ಮಾನಿಸಲಾಗುವುದು. ಸದಾನಂದ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಸದಾಶಿವ ಉಳ್ಳಾಲ ಭಾಗವಹಿಸುವರು. ಶೆಫ್ ಟಾಕ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸರ್ವಿಸಸ್ನ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಬಿ. ಪೂಜಾರಿ ಬಹುಮಾನ ವಿತರಿಸುವರು ಎಂದು ಗೌರವ ಸಲಹೆಗಾರ ವಿಶ್ವಾಸ್ ದಾಸ್ ಹೇಳಿದರು.
100ಕ್ಕೂ ಹೆಚ್ಚು ಆಹಾರ ಮಳಿಗೆಗಳನ್ನು ನಿರೀಕ್ಷಿಸಲಾಗಿದೆ. ಕಬಡ್ಡಿ ಟೂರ್ನಿಗೆ 2 ಲಕ್ಷಕ್ಕೂ ಅಧಿಕ ವೀಕ್ಷಕರನ್ನು ನಿರೀಕ್ಷಿಸಲಾಗಿದೆ ಎಂದು ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವ ಹೇಳಿದರು.
ಹರೀಶ್ ನಾಯಕ್, ಅಝ್ಪರ್ ರಜಾಕ್, ಕರುಣಾಕರ್, ಹಮೀದ್ ಅಮ್ಮಿ, ದೀಪಕ್ ಪಿಲಾರ್, ವಿನೋದ್ ಶೆಟ್ಟಿ, ಸುಕೇಶ್ ಭಂಡಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.