
ಮಂಗಳೂರು: ‘ಕರಾವಳಿಯಲ್ಲಿ ದ್ವೇಷ ಕೊಲೆಗಳು ನಿಂತಿವೆ. ಈ ಭಾಗದಲ್ಲಿ ಹಿಂದೆ ಒಳ್ಳೆಯ ವಾತಾವರಣವಿತ್ತು. ಈಗ ಅಭಿವೃದ್ಧಿಗೆ ಪೂರಕವಾದ ವಾತಾವರಣ ಮತ್ತೆ ಮರುಕಳಿಸಿರುವುದು ಸಮಾಧಾನ ತಂದಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ಮೂಡುಬಿದಿರೆ ಠಾಣೆ ಸಿಬ್ಬಂದಿಗಾಗಿ ನಿರ್ಮಿಸಿರುವ 12 ವಸತಿ ಗೃಹಗಳನ್ನು ಉದ್ಘಾಟಿಸಿ, ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ 54 ವಸತಿ ಗೃಹಗಳ ನಿರ್ಮಾಣದ ₹ 20 ಕೋಟಿ ಮೊತ್ತದ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಂಗಳವಾರ ಮಾತನಾಡಿದರು.
’ಕರಾವಳಿ ಪ್ರದೇಶದಲ್ಲಿ ಗತ ವೈಭವ ಮರಳಿ ಕಾಣುವಂತಾಗಿದ್ದಕ್ಕೆ ಪೊಲೀಸರು ಮಾಡಿರುವ ಕೆಲಸಗಳ ಜೊತೆಗೆ ಜನರಲ್ಲೂ ಈ ವಿಚಾರದಲ್ಲಿ ಅರಿವು ಉಂಟಾಗಿರುವುದೂ ಕಾರಣ. ಇಲ್ಲಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದರು.
‘ಜನರು ಹೇಗೆ ವರ್ತಿಸಿದರೂ ಪೊಲೀಸರು ಕಾನೂನು ಚೌಕಟ್ಟಿನಲ್ಲೇ ಕ್ರಮವಹಿಸಬೇಕಾಗುತ್ತದೆ. ಪ್ರತಿಕೂಲ ಸನ್ನಿವೇಶಗಳಲ್ಲೂ ಪೊಲೀಸರು ಕೆಲಸ ಮಾಡಬೇಕಾಗುತ್ತದೆ’ ಎಂದರು.
‘ರಾಜ್ಯದಲ್ಲಿ 1.10 ಲಕ್ಷ ಪೊಲೀಸ್ ಸಿಬ್ಬಂದಿ ಇದ್ದು, ಶೇ 40 ರಷ್ಟು ಸಿಬ್ಬಂದಿಗೆ ಮಾತ್ರ ವಸತಿ ಕಲ್ಪಿಸಲಾಗಿದೆ. 2030ರ ಒಳಗೆ ಅವರೆಲ್ಲರಿಗೂ ವಸತಿ ಕಲ್ಪಿಸುವ ಗುರಿ ನಮ್ಮದು. ನಗರದಲ್ಲಿ 1900 ಸಿಬ್ಬಂದಿ ಇದ್ದಾರೆ. ಮುಂದಿನ ವರ್ಷವೂ 100 ವಸತಿಯನ್ನು ಇಲ್ಲಿಗೆ ಮಂಜೂರು ಮಾಡುತ್ತೇವೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ವೇದವ್ಯಾಸ ಕಾಮತ್, ನಗರವನ್ನು ಡ್ರಗ್ಸ್ ಮುಕ್ತಗೊಳಿಸಲು ನಗರ ಪೊಲೀಸ್ ಕಮಿಷನರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಕನಿಷ್ಠ ವೇತನ ಸಲಹಾ ಮಂಡಳಿ ಟಿ.ಎಂ.ಶಹೀದ್, ಕರ್ನಠಾಟಕ ಗೇರು ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಮಮತಾ ಗಟ್ಟಿ, ಪರಿಸರ ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಶಾಲೆಟ್ ಪಿಂಟೊ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್, ಡಿಸಿಪಿಗಳಾದ ರವಿಶಂಕರ್, ಮಿಥುನ್, ಎಂಜಿನಿಯರ್ ವೀರಭದ್ರಪ್ಪ ಮತ್ತಿತರರು ಭಾಗವಹಿಸಿದ್ದರು.
ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್. ಸ್ವಾಗತಿಸಿದರು.
‘2ಹೊಸ ಠಾಣೆ 4 ಠಾಣೆಗೆ ಹೊಸ ಕಟ್ಟಡ ಒದಗಿಸಿ’
‘ಮಂಗಳೂರು ನಗರಕ್ಕೆ ಎರಡು ಹೊಸ ಠಾಣೆಗಳಿಗೆ ಬೇಡಿಕೆ ಇದೆ. ಕಂಕನಾಡಿ ಠಾಣೆ ಸಂಚಾರ ಠಾಣೆ ಬಂದರು ಠಾಣೆ ಸೇರಿ ನಾಲ್ಕು ಠಾಣೆಗಳಿಗೆ ಹೊಸ ಕಟ್ಟಡದ ಅಗತ್ಯವಿದೆ. ಇದಕ್ಕೆ ಬಜೆಟ್ನಲ್ಲಿ ಅನುದಾನ ಒದಗಿಸಬೇಕು. ಕರಾವಳಿ ಕಾವಲು ಪೊಲೀಸ್ ಪಡೆಯನ್ನು ಬಲಪಡಿಸಬೇಕು. ಜೈಲನ್ನು ಸ್ಥಳಾಂತರಿಬೇಕು’ ಎಂದು ವೇದವ್ಯಾಸ ಕಾಮತ್ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವ ‘ನಗರಕ್ಕೆ ಹೊಸ ಠಾಣೆ ಮಂಜೂರು ಮಾಡಬೇಕಾದರೆ ಅದರ ವ್ಯಾಪ್ತಿಯಲ್ಲಿ ಕನಿಷ್ಠ 60 ಸಾವಿರ ಜನಸಂಖ್ಯೆ ಹಾಗೂ ವರ್ಷದಲ್ಲಿ 300 ಅಪರಾಧ ಕೃತ್ಯಗಳು ವರದಿಯಾಗಿರಬೇಕು ಎಂದು ಕೇಂದ್ರ ಸರ್ಕಾರ ಮಾನದಂಡ ರೂಪಿಸಿದೆ. ಅಗತ್ಯ ಇದ್ದರೆ ಹೊಸ ಠಾಣೆ ಮಂಜೂರು ಮಾಡುತ್ತೇವೆ. ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸುತ್ತೇವೆ’ ಎಂದರು.
ಅಧಿಕಾರಿಗಳ ಸಭೆ ನಡೆಸಿದ ಸಚಿವ
ಮಂಗಳೂರು ಪೊಲೀಸ್ ಕಮಿಷನರೇಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ಬಗ್ಗೆ ಗೃಹಸಚಿವ ಜಿ.ಪರಮೇಶ್ವರ ಅವರು ಪೊಲೀಸ್ ಅಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಇಲ್ಲಿನ ಕಾನೂನು ಸುವ್ಯವಸ್ಥೆ ಹದ್ದುಬಸ್ತಿಗೆ ಬಂದಿದೆ. ಆದರೂ ಕಠಿಣ ಕ್ರಮಗಳನ್ನು ಮುಂದುವರಿಸಬೇಕು ಎಂದು ಸೂಚಿಸಿದ್ದೇನೆ. 2026-27ನೇ ಸಾಲಿನ ಬಜೆಟ್ನಲ್ಲಿ ಇಲ್ಲಿನ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಬೇಡಿಕೆಗಳ ಬಗ್ಗೆ ಹಾಗೂ ಕೆಲ ಆಂತರಿಕ ವಿಚಾರಗಳ ಬಗ್ಗೆ ಚರ್ಚಿಸಿದ್ದೇವೆ’ ಎಂದು ತಿಳಿಸಿದರು.
‘ಪೆಡ್ಲರ್ ಬಂಧನದಿಂದ ಡ್ರಗ್ಸ್ ಸೇವನೆ ಪ್ರಕರಣಗಳೂ ಕಡಿಮೆ ಆಗಿವೆ. ಡ್ರಗ್ಸ್ ಪಿಡುಗು ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಅದರ ನಿಯಂತ್ರಣಕ್ಕೆ ಕಠಿಣ ಕ್ರಮಗಳು ಮುಂದುವರಿಸಬೇಕು. ಆಯಾ ಕಾಲೆಜುಗಳ ಆಡಳಿತ ಮಂಡಳಿಯನ್ನೂ ಇದಕ್ಕೆ ಹೊಣೆ ಮಾಡಬೇಕು. ಕಾಲೇಜುಗಳಿಗೆ ಕನಿಷ್ಠ 15 ದಿನಗಳಿಗೊಮ್ಮೆ ಪೊಲೀಸ್ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದ್ದೇನೆ’ ಎಂದರು.
‘ಕರಾವಳಿ ಕಾವಲು ಪೊಲೀಸ್ ಪಡೆಯ 15 ಬೋಟ್ಗಳು ಹಳತಾಗಿದ್ದು ಮೂರು ನಾಲ್ಕು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಬೋಟ್ ಖರೀದಿಗೂ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಯವರ ಬಳಿ ಕೋರಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.