ADVERTISEMENT

ರಾಜ್ಯದಲ್ಲಿ ‘ಹಲಾಲ್ ಮಾಂಸ’ ಚರ್ಚೆ: ಜಾಗೃತಿ ಅಗತ್ಯ ಎಂದ ರಹೀಂ ಉಚ್ಚಿಲ್

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 8:19 IST
Last Updated 30 ಮಾರ್ಚ್ 2022, 8:19 IST
ರಹೀಂ ಉಚ್ಚಿಲ್
ರಹೀಂ ಉಚ್ಚಿಲ್   

ಮಂಗಳೂರು:‘ಹಲಾಲ್ ಎನ್ನುವುದು ಇಸ್ಲಾಂನ ಅವಿಭಾಜ್ಯ ಅಂಗವಾಗಿದೆ. ಅಲ್ಲಾಹುವಿನ ಹೆಸರಿನಲ್ಲಿ ಕೊಯ್ದ ಮಾಂಸವನ್ನೇ ಭಕ್ಷಣೆ ಮಾಡಬೇಕು ಎನ್ನುವುದು ಜಗತ್ತಿನ ಮುಸಲ್ಮಾನರಿಗೆ ಇರುವ ನಿಯಮವಾಗಿದೆ. ಆದರೆ, ಇದು ಯಾವುದೇ ಕಾರಣಕ್ಕೂ ಮುಸ್ಲಿಮೇತರರಿಗೆ ಅನ್ವಯವಾಗುವುದಿಲ್ಲ. ಹೀಗಿದ್ದರೂ ಸತ್ಯವನ್ನು ಮರೆಮಾಚಿ ಇತರ ಧರ್ಮೀಯರಿಗೂ ತಿನ್ನಿಸಿ ಅವರನ್ನು ಭ್ರಷ್ಟರನ್ನಾಗಿ ಮಾಡುವುದು ಸರಿಯಲ್ಲ’ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಹೀಂ ಉಚ್ಚಿಲ್ ಹೇಳಿದ್ದಾರೆ.

’ಹಿಂದೂ – ಮುಸಲ್ಮಾನರ ವ್ಯಾಪಾರ ನಿಷೇಧ ಎಂಬುದು ಕಾಲಕಾಲಕ್ಕೆ ನಡೆಯುತ್ತದೆ ಮತ್ತು ಕ್ರಮೇಣ ಸರಿಯಾಗುತ್ತದೆ. ಆದರೆ, ಹಲಾಲ್ ಪದ್ದತಿ 1400 ವರ್ಷಗಳ ಹಿಂದೆ ಆರಂಭವಾಗಿದ್ದು, ಮುಂದೆಯೂ ಮುಂದುವರಿಯುವಂತಹ ಕ್ರಮವಾಗಿದೆ. ಹಲಾಲ್‌ ಮಾಂಸದ ಬಗೆಗಿನ ಸತ್ಯಾಸತ್ಯತೆಯನ್ನು ಮುಸ್ಲಿಮೇತರರು ಅರ್ಥ ಮಾಡಿಕೊಂಡು, ಅಲ್ಲಾಹುವಿನ ಹೆಸರಿನಲ್ಲಿ ಕೊಯ್ದಮಾಂಸವು ತಮಗೆ ಒಪ್ಪಿಗೆ ಇಲ್ಲ ಎಂದಾದಲ್ಲಿ ಸ್ವ ಇಚ್ಚೆಯಿಂದ ತ್ಯಜಿಸಬಹುದು. ಮುಸ್ಲಿಮೇತರ ವ್ಯಾಪಾರಿಗಳಿಂದ ಮಾಂಸ ಖರೀದಿಸಿ ಸೇವಿಸುವುದೇ ಇದಕ್ಕೆ ಇರುವ ಉತ್ತಮ ಪರಿಹಾರವಾಗಿದೆ’ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಹಲಾಲ್‌ನಲ್ಲಿ ಇರುವ ನಿಬಂಧನೆಗಳು, ಬಳಸುವ ಪದಗಳು ಮತ್ತು ಅದರ ಅರ್ಥವನ್ನು ಮುಸ್ಲಿಮೇತರರಿಗೆ ತಿಳಿಸುವುದು ಮುಸ್ಲಿಂ ಸಮಾಜದ ಕರ್ತವ್ಯವಾಗಿದ್ದು, ಈ ಸತ್ಯಾಸತ್ಯತೆಯನ್ನು ಮರೆಮಾಚಿ ವ್ಯಾಪಾರ ಮಾಡುವುದು ಸರಿಯಾದ ಕ್ರಮವಲ್ಲ. ಈ ವಿಚಾರದಲ್ಲಿ ಎರಡು ಸಮಾಜದ ಮುಖಂಡರು ಗಂಭೀರವಾದ ಚರ್ಚೆ ನಡೆಸಿ, ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಹಲಾಲ್‌ ಮಾಂಸದ ವಿಚಾರವನ್ನು ರಾಜಕೀಯ ಉದ್ದೇಶಕ್ಕೆ ಯಾರು ಬಳಸಿಕೊಳ್ಳಬಾರದು’ಎಂದು ಎರಡೂ ಸಮಾಜದ ಮುಖಂಡರಲ್ಲಿ ರಹೀಂ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.